ಧಾರವಾಡ : ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಕರ್ತವ್ಯ ನಿರತ ಧಾರವಡ ಮೂಲದ ಯೋಧರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ವಸಂತರೆಡ್ಡಿ ಕೆಂಚರೆಡ್ಡಿನವರ್ (45) ಮೃತ ಯೋಧ.ಧಾರವಾಡ ತಾಲೂಕಿನ ಗರಗ ಮೂಲದ ವಸಂತರೆಡ್ದಿ 18ನೇ ಇನ್ಫಂಟ್ರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ರಾಜಸ್ಥಾನದ ಬಾಡಮೆರ್ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಕಳೆದ 24 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಸಂತರೆಡ್ಡಿ ಅವರಿಗೆ ಬುಧವಾರ ಹಠಾತ್ ಹೃದಯಾಘಾತ ಸಂಭವಿಸಿದ್ದು, ಕೊನೆಯುಸಿರೆಳೆದಿದ್ದಾರೆ. ವೀರ ಯೋಧನ ಪಾರ್ಥಿವ ಶರೀರವು ಇಂದು ಸಂಜೆ 6 ಗಂಟೆಗೆ ಗರಗ ಗ್ರಾಮಕ್ಕೆ ಬರಲಿದೆ.
ವಿಮಾನದ ಮೂಲಕ ಗೋವಾಗೆ ಪಾರ್ಥಿವ ಶರೀರವನ್ನು ತಂದು ಅಲ್ಲಿಂದ ರಸ್ತೆ ಮೂಲಕ ಸ್ವಗ್ರಾಮಕ್ಕೆ ತರಲಾಗುತ್ತದೆ. ನಾಳೆ ಶುಕ್ರವಾರ ಯೋಧನ ಅಂತ್ಯಕ್ರಿಯೆ ಭಾರತೀಯ ಸೇನೆಯ ರೀತಿ ನಿಯಮಗಳಂತೆ ನಡೆಯಲಿದೆ ಎಂದು ತಿಳಿದುಬಂದಿದೆ.


