ಬೆಂಗಳೂರು: ರಾಜ್ಯದ ಬಡತನ ರೇಖೆಗಿಂತ ಕೆಳಗಿರುವ (BPL) ಕಾರ್ಡ್ದಾರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ.
ಪ್ರಸ್ತುತ 'ಅನ್ನಭಾಗ್ಯ' ಯೋಜನೆಯಡಿ ವಿತರಿಸಲಾಗುತ್ತಿರುವ ಉಚಿತ ಅಕ್ಕಿಯ ಪೈಕಿ ಹೆಚ್ಚುವರಿ ಅಕ್ಕಿಯ ಬದಲಿಗೆ, ದಿನಬಳಕೆಯ ಅಗತ್ಯ ಪದಾರ್ಥಗಳನ್ನೊಳಗೊಂಡ 'ಇಂದಿರಾ ಆಹಾರ ಕಿಟ್' ನೀಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರ್ಧರಿಸಿದೆ.
ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ನೀಡಲಾಗುತ್ತಿರುವ ಅಕ್ಕಿಯು ಅರ್ಹರಿಗೆ ತಲುಪದೆ ಕಾಳಸಂತೆಗೆ ಸೇರುತ್ತಿರುವ ಗಂಭೀರ ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಪ್ರಮುಖ ಹೆಜ್ಜೆ ಇಟ್ಟಿದೆ.
ಈ ಕುರಿತು ಮಾಹಿತಿ ನೀಡಿರುವ ಆಹಾರ ಸಚಿವ ಕೆ. ಹೆಚ್. ಮುನಿಯಪ್ಪ ಅವರು, "ಉಚಿತವಾಗಿ ನೀಡಲಾಗುತ್ತಿರುವ ಹೆಚ್ಚುವರಿ ಅಕ್ಕಿಯು ಬಡ ಕುಟುಂಬಗಳಿಗೆ ಸಂಪೂರ್ಣವಾಗಿ ತಲುಪುತ್ತಿಲ್ಲ. ಬದಲಾಗಿ, ಅದು ಕಾಳಸಂತೆಕೋರರ ಪಾಲಾಗುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ.
ಈ ಅಕ್ರಮ ತಡೆಗಟ್ಟುವ ಜೊತೆಗೆ ಬಿಪಿಎಲ್ ಕುಟುಂಬಗಳಿಗೆ ಪೌಷ್ಟಿಕಾಂಶಯುಕ್ತ ಆಹಾರ ತಲುಪಿಸುವುದು ನಮ್ಮ ಮುಖ್ಯ ಉದ್ದೇಶ. ಹೀಗಾಗಿ ಅಕ್ಕಿ ನೀಡುವ ಬದಲು ಅಗತ್ಯ ದಿನಸಿ ಪದಾರ್ಥಗಳ ಆಹಾರ ಕಿಟ್ ವಿತರಿಸಲು ತೀರ್ಮಾನಿಸಲಾಗಿದೆ" ಎಂದು ತಿಳಿಸಿದ್ದಾರೆ.


