ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಅಂಕ ಗಳಿಕೆ ವಿದ್ಯಾರ್ಥಿಯ ಬೌದ್ದಿಕ ಮಟ್ಟ ಹೇಗಿದ ಎಂಬುದನ್ನು ತಿಳಿಸಬಹುದೇ ವಿನಃ ಮಾನವೀಯ ಮೌಲ್ಯಗಳು, ಸಾಮಾಜಿಕ ಚಿಂತನೆಯ ಮಾನದಂಡವಾಗುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಅಂಕ ಗಳಿಸುವ ಯಂತ್ರಗಳಾಗದೆ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳುವ ಶಿಕ್ಷಣ ಪಡೆಯಲು ಆಸಕ್ತರಾಗಬೇಕು. ವಿದ್ಯೆಯ ಜೊತೆಗೆ ಸಂಸ್ಕಾರ ಮತ್ತು ವಿನಯತೆ ಬೆಳೆಸಿಕೊಂಡಾಗ ಮಾತ್ರ ಕಲಿತ ವಿದ್ಯೆ ಸಾರ್ಥಕವಾಗಿ ಜೀವನದಲ್ಲಿ ಯಶಸ್ಸು ದೊರೆಯುತ್ತದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ತನ್ನಲ್ಲಿರುವ ಕೀಳರಿಮೆಯನ್ನು ಮೊದಲು ಹೋಗಲಾಡಿಸಬೇಕು. ವಿದ್ಯಾಬ್ಯಾಸದ ಹಂತದಲ್ಲಿ ತನಗೆ ಗೊತ್ತಿಲ್ಲದ ಪಠ್ಯದ ವಿಷಯಗಳನ್ನು ಉಪನ್ಯಾಸಕರ ಬಳಿ ಕೇಳಿ ತಿಳಿದುಕೊಳ್ಳುವುದಕ್ಕೆ ಹಿಂಜರಿಯಬಾರದು. ಪ್ರತಿಯೊಬ್ಬರ ಬೌದ್ದಿಕ ಮಟ್ಟವೂ ಬೇರೆ ಬೇರೆಯಾಗಿರುತ್ತದೆ. ಕೆಲವರು ಬೇಗ ವಿಷಯವನ್ನು ಗ್ರಹಿಸುವ, ಅರ್ಥೈಸಿಕೊಳ್ಳುವ ಶಕ್ತಿಯನ್ನು ಹೊಂದಿದ್ದರೆ, ಕೆಲವರು ನಿಧಾನವಾಗಿ ಗ್ರಹಿಸಬಲ್ಲವರಾಗಿರುತ್ತಾರೆ. ಆ ಕಾರಣದಿಂದ ತನಗೆ ಏನೂ ಗೊತ್ತಾಗುವುದಿಲ್ಲ, ಅರ್ಥವಾಗುವುದಿಲ್ಲ ಎಂದು ಸುಮ್ಮನಾಗದೆ ವಿಷಯವನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನವನ್ನು ಮಾಡಬೇಕು. ಹಿಂಜರಿಕೆ, ಕೀಳರಿಮೆಯ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳದ ಹೊರತು ಯಶಸ್ಸು ಸಾಧಿಸಲು ಸಾಧ್ಯವಿಲ್ಲ ಎಂದರು.
ಕಾಲೇಜಿನ ಪ್ರಾಂಶುಪಾಲ ಕೆ.ಎಲ್.ಅನಂತರಾಮು ಅಧ್ಯಕ್ಷತೆ ವಹಿಸಿದ್ದರು. ಬೇರೆಡೆಗೆ ವರ್ಗಾವಣೆಗೊಂಡಿರುವ ಉಪನ್ಯಾಸಕರಾದ ವಿನಯ್, ಪೂರ್ಣಚಂದ್ರ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕರಾದ ನಂಜೇಗೌಡ, ಶಹನಾಜ್, ಹರೀಶ್, ಕೋಮಲ ಸೇರಿದಂತೆ ಬೋಧಕ, ಬೋಧಕೇತರ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್

