ತುರುವೇಕೆರೆ : ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರು ಮಕ್ಕಳಿಗೆ ಶಿಕ್ಷೆ ವಿಧಿಸುವಂತಿಲ್ಲ ಎಂಬ ಕಾನೂನನ್ನು ಸರ್ಕಾರ ಜಾರಿಗೊಳಿಸಿದೆ. ಆದರೆ ಶಿಕ್ಷೆಯಿಲ್ಲದೆ ಶಿಕ್ಷಣ ಸಾಧ್ಯವಿಲ್ಲ ಎಂದು ಬದರೀಕಾಶ್ರಮದ ಶ್ರೀ ಸ್ವಾಮಿ ಧರ್ಮವ್ರತಾನಂದಜಿ ಮಹಾರಾಜ್ ತಿಳಿಸಿದರು.

ಪಟ್ಟಣದ ಶ್ರೀ ಗಾಯತ್ರಿ ಸಮುದಾಯ ಭವನದಲ್ಲಿ ಶ್ರೀ ಪ್ರಣವಾನಂದ ಸ್ವಾಮಿಯವರ ಪುಡಿವಟ್ಟಿನಿಂದ ತಾಲ್ಲೂಕು ಬ್ರಾಹ್ಮಣ ಸಭಾ ವತಿಯಿಂದ ಆಯೋಜಿಸಿದ್ದ ಗುರು ಪೌರ್ಣಮಿ ಕಾರ್ಯಕ್ರಮದಲ್ಲಿ ಪ್ರವಚನ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಅವರನ್ನು ಶಿಕ್ಷಿಸಿ ತಪ್ಪನ್ನು ತಿದ್ದಿ ಸನ್ಮಾರ್ಗದಲ್ಲಿ ನಡೆಯಲು ಅವಕಾಶ ಮಾಡಿಕೊಡಲಾಗುತ್ತಿತ್ತು. ಆದರೆ ಇಂದು ಯಾವುದೇ ಮಕ್ಕಳನ್ನು ಶಿಕ್ಷಿಸುವಂತಿಲ್ಲ. ಗುರುವಿನ ಪ್ರೀತಿ ಮತ್ತು ಕೋಪವನ್ನು ಅರ್ಥ ಮಾಡಿಕೊಳ್ಳುವಷ್ಟು ಮಕ್ಕಳು ಸಮರ್ಥರಾಗಿದ್ದಾರೆ. ಇಂದಿನ ಮಕ್ಕಳು ಬಹಳ ಬುದ್ದಿವಂತರು. ಅವರಲ್ಲಿನ ಬುದ್ದಿವಂತಿಕೆ ದಾರಿತಪ್ಪದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಪೋಷಕರು ಮತ್ತು ಗುರುಗಳದ್ದಾಗಿದೆ ಎಂದರು.
ನಮ್ಮ ಮಕ್ಕಳು ನಮ್ಮಂತೆ ಕಷ್ಟಪಡುವುದು ಬೇಡ ಎಂಬ ಮನೋಭಾವನೆಯನ್ನು ಪೋಷಕರು ಕೈಬಿಡಬೇಕಿದೆ. ಬದುಕಿನ ಹಾದಿಯಲ್ಲಿ ಪಟ್ಟಂತಹ ಕಷ್ಟ ಶ್ರಮದಿಂದಲೇ ಇಂದು ನೀವು ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗಿದೆ. ಮಕ್ಕಳಿಗೆ ಬದುಕಿನ ಕಷ್ಟದ ಅರಿವಾಗಬೇಕು, ಜೀವನ ಏನೆಂಬುದು ಅರ್ಥವಾಗಬೇಕು. ಸುಖವಾಗಿ ಬೆಳೆದವರಿಗೆ ಕಷ್ಟ ಬಂದಾಗ ಸಹಿಸುವ, ಎದುರಿಸುವ ಶಕ್ತಿ ಇರುವುದಿಲ್ಲ ಎಂದ ಅವರು, ಬಾಲ್ಯದಲ್ಲಿ ಮಕ್ಕಳನ್ನು ಕೈಹಿಡಿದು ನಡೆಸಬೇಕು, ತದ ನಂತರ ಅವರಿಗೆ ಮಾರ್ಗದರ್ಶಕರಾಗಬೇಕು. ಬಾಲ್ಯದಲ್ಲಿ ಕಲಿಸಿದ ವಿದ್ಯೆ, ಸಂಸ್ಕಾರ ವ್ಯಕ್ತಿಯ ಕೊನೆಯವರೆಗೂ ಕೈಹಿಡಿದು ಕಾಪಾಡುತ್ತದೆ. ಎಲ್ಲರೂ ಗುರುವಾಗಲು ಪ್ರಯತ್ನಿಸುತ್ತಾರೆ, ಆದರೆ ಗುರುವಾಗುವ ಮೊದಲು ಶಿಷ್ಯನಾಗಿ ಪಟ್ಟಂತಹ ಶ್ರಮ ಆತನ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸುತ್ತದೆ ಎಂದರು.
ಬ್ರಾಹ್ಮಣ ಸಭಾ ವತಿಯಿಂದ ಬದರೀಕಾಶ್ರಮದ ಶ್ರೀ ಸ್ವಾಮಿ ಧರ್ಮವ್ರತಾನಂದಜಿ ಮಹಾರಾಜ್ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಗುರು ಪೌರ್ಣಿಮೆ ಪ್ರಯುಕ್ತ ಶ್ರೀಧರ್ ಪಂಡಿತ್ ಅವರನ್ನು ಸನ್ಮಾನಿಸಲಾಯಿತು. ಬ್ರಾಹ್ಮಣ ಸಭಾ ಅಧ್ಯಕ್ಷ ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರವಿಶಂಕರ್, ಮಾಜಿ ಅಧ್ಯಕ್ಷರಾದ ರಂಗನಾಥ್, ಅಮಾನಿಕೆರೆ ಮಂಜುನಾಥ್, ನಿರ್ದೇಶಕರಾದ ನಂಜುಂಡಸ್ವಾಮಿ, ಗಿರೀಶ್ ಕೆ ಭಟ್, ಪ್ರಾಣೇಶ್, ರಾಮಚಂದ್ರ ಸೇರಿದಂತೆ ಬ್ರಾಹ್ಮಣ ಸಭಾ, ಲಲಿತಾ ವಿಪ್ರ ಮಹಿಳಾ ಮಂಡಳಿ, ವಿಪ್ರ ಸೇವಾ ಟ್ರಸ್ಟ್ ನ ಪದಾಧಿಕಾರಿಗಳು, ಬಾಂದವರು ಉಪಸ್ಥಿತರಿದ್ದರು.
ವರದಿ : ಗಿರೀಶ್ ಕೆ ಭಟ್


