ಭಾಲ್ಕಿ : ಕರ್ನಾಟಕದಲ್ಲಿ ಕನ್ನಡ ಉಳಿಸಿ, ಬೆಳೆಸುವ ಕಾರ್ಯ ಕಸಾಪ ಸೇರಿದಂತೆ ನಾಡಿನ ಸಮಸ್ಥ ಕನ್ನಡಿಗರದ್ದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾಭಾರತಿ ಪಬ್ಲಿಕ್ ಶಾಲೆಯಲ್ಲಿ, ಕ.ಸಾ.ಪ. ಕ.ರಾ.ಸ.ನೌಕರರ ಸಂಘ, ಆದರ್ಶ ಶಿಕ್ಷಣ ಸಂಸ್ಥೆ ಹಾಗು ಬಸವ ಭಾಗ್ಯ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕನ್ನಡ ಉಳಿಸಿ ಬೆಳೆಸುವುದು ಎಲ್ಲಾ ಕನ್ನಡಿಗರ ಕನಸಾಗಿದೆ. ನಮ್ಮ ಹಿರಿಯರು ಭಾಷಾವಾರು ಪ್ರಾಂಗಳ ವಿಂಗಡನೆಯಲ್ಲಿ ಕನ್ನಡ ಮಾತನಾಡುವ ಗಡಿ ಭಾಗದಲ್ಲಿರುವ ನಮಗೆ ಕರ್ನಾಟಕದಲ್ಲಿ ಉಳಿಯುವಂತೆ ಮಾಡಿರುವುದು ನಮ್ಮೆಲ್ಲರ ಪುಣ್ಯ, ಇದನ್ನು ನಾವು ಉಳಿಸಿ, ಬೆಳೆಸಿಕೊಂಡು ಹೋಗಬೇಕಾಗಿದೆ. ಬೇರೆ ಭಾಷೆಗಳನ್ನು ನಾವು ಗೌರವಿಸೋಣ ಅದರ ಜೊತೆಗೆ ಕನ್ನಡತನ ಮರೆಯಬಾರದು. ನಮ್ಮ ಮಾತೃಭಾಷೆ ಕನ್ನಡವನ್ನು ಪ್ರೀತಿಸಬೇಕು. ಪತ್ರಕರ್ತರು ಕನ್ನಡ ಭಾಷೆಯನ್ನು ಬೆಳೆಸುವಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ. ಅವರು ನಿಜಾಂಶವನ್ನು ಅಚ್ಚಕನ್ನಡದಲ್ಲಿ ಬರೆದು ಜನಮಾನಸಕ್ಕೆ ಮುಟ್ಟಿಸುವ ಕಾರ್ಯ ಮಾಡುತ್ತಿರುವುದು ಪ್ರಶಂಶನಾರ್ಹವಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪೊಲೀಸ್ ಉಪಾಧೀಕ್ಷಕ ಬಲ್ಲಪ್ಪ ನಂದಗಾವಿ, ಗಡಿಭಾಗದಲ್ಲಿ ಕನ್ನಡ ಉಳಿಯಬೇಕಾದರೆ ನಾವೆಲ್ಲರೂ ನಮ್ಮ ಮನೆಯಿಂದಲೇ ಕನ್ನಡವನ್ನು ಬೆಳೆಸುವಂತಾಗಬೇಕು. ನಮ್ಮ ತಾಯಿ, ತಾಯಿನಾಡಿಗಾಗಿ ನಾವೆಲ್ಲರೂ ಕಟಿಬದ್ಧರಾಗಿರಬೇಕು. ಪತ್ರಕರ್ತರು ಜಾತಿ, ಧರ್ಮಗಳಿಂದ ವಿಮುಕ್ತರಾಗಿ ಸಾಮಾಜಿಕ ಚಿಂತಕರಾಗಿ ಕಾರ್ಯನಿರ್ವಹಿಸಬೇಕು. ಪೋಸ್ಕೋ ಕಾಯಿದೆ ಸೇರಿದಂತೆ ಹಲವು ವರದಿಗಳಲ್ಲಿ ಗೌಪ್ಯತೆಗಳನ್ನು ಕಾಪಾಡಿಕೊಂಡು ಹೋಗುವು ಕಾರ್ಯ ಪತ್ರಕರ್ತರದ್ದಾಗಿದೆ. ತಕ್ಷಣ ಸುದ್ದಿಗಳನ್ನು ಮುಟ್ಟಿಸುವ ಧಾವಂತದಲ್ಲಿ ಸತ್ಯವನ್ನು ಮರೆಮಾಚಬಾರದು. ಕನ್ನಡ ಕಲಿಕೆಯ ಜೊತೆಯಲ್ಲಿ ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ಕಾರ್ಯವಾಗಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ ಬನ್ನಾಳೆ ಮಾತನಾಡಿ, ಪತ್ರಕರ್ತರು ಸಮಾಜದ ಕನ್ನಡಿ ಎಂಬ ಜವಾಬ್ದಾರಿಯನ್ನು ಅರಿತು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು. ಯುವ ಪತ್ರಕರ್ತರು ತಮ್ಮ ಹರಿತವಾದ ಬರವಣಿಗೆಯ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಕರೆ ನೀಡಿದರು.
ವಿದ್ಯಾಭಾರತಿ ಪಬ್ಲಿಕ್ ಶಾಲೆಯ ಮುಖ್ಯಶಿಕ್ಷಕ ರೋಹಿತ್ ವೈರಾಗೆ ಮಾತನಾಡಿ, ಪತ್ರಕರ್ತರು ಪ್ರಚಲಿತ ವಿದ್ಯಮಾನಗಳಬಗ್ಗೆ ಬೆಳಕು ಚೆಲ್ಲಬೇಕು. ಕ.ಸಾ.ಪ ಸೇರಿದಂತೆ ಸಂಘ ಸಂಸ್ಥೆಯವರು ವಿದ್ಯಾರ್ಥಿಗಳಲ್ಲಿ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸುವ ಕಾರ್ಯಮಾಡಬೇಕು ಎಂದು ಸಲಹೆ ನೀಡಿದರು. ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಅಶೋಕ ರಾಜೋಳೆ ಪತ್ರಿಕಾರಂಗ ಬೆಳೆದು ಬಂದ ದಾರಿಯಬಗ್ಗೆ ಬೆಳಕು ಚೆಲ್ಲಿಸಿದರು. ಕಾರ್ಯಕ್ರಮದಲ್ಲಿ ಕ.ರಾ.ಸ.ನೌ.ಸಂಘದ ಪ್ರಧಾನ ಕಾರ್ಯದರ್ಶಿ ರಾಜೆಪ್ಪ ಪಾಟೀಲ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ ಬಿಜಿಪಾಟೀಲ ಉಪಸ್ಥಿತರಿದ್ದರು.
ಇದೇವೇಳೆ ನಿಕಟಪೂರ್ವ ಅಧ್ಯಕ್ಷ ಜಯರಾಜ ದಾಬಶೆಟ್ಟಿ, ಹಿರಿಯ ಪತ್ರಕರ್ತರಾದ ಗಣಪತಿ ಬೋಚರೆ, ವಿಜಯಕುಮಾರ ಪರ್ಮಾ, ರಾಜೇಶ ಮುಗಟೆ ಸೇರಿದಂತೆ ಕಾರ್ಯನಿರತ ಪತ್ರಕರ್ತರನ್ನು, ಸೋಶೊಯಲ ಮಿಡಿಯಾ ಮಾಧ್ಯಮ ಮಿತ್ರರನ್ನು ಸನ್ಮಾನಿಸಿ ಗೌರವಿಸಲಾಯಿತು. ರೋಹಿತ ವೈರಾಗೆ ಸ್ವಾಗತಿಸಿದರು. ದೀಪಕ ಥಮಕೆ ನಿರೂಪಿಸಿದರು. ಸಂತೋಷ ಬಿಜಿಪಾಟೀಲ ವಂದಿಸಿದರು.

೧. ಬರುವ ನವ್ಹೆಂಬರ್ ತಿಂಗಳಲ್ಲಿ ಶಿಕ್ಷಣ ಇಲಾಖೆ ಆಯೋಜಿಸುವ ಭಾಷಣ ಸ್ಪರ್ಧೆಗಳಲ್ಲಿ ಕನ್ನಡ ಭಾಷೆ ಹೊರತು ಪಡೆಸಿ, ಬೇರೆ ಯಾವುದೇ ಭಾಷೆಗಳ ಶಬ್ದಗಳನ್ನು ಬಳಸದೇ ಭಾಷಣ ಮಾಡುವ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನಗದು ರೂಪದಲ್ಲಿ ನೀಡಲಾಗುವುದು. - ನಾಗಭೂಷಣ ಮಾಮಡಿ, ಅಧ್ಯಕ್ಷರು, ಕ.ಸಾ.ಪ ಭಾಲ್ಕಿ.
೨. "ಗಡಿಭಾಗದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಕನ್ನಡ ಸಾಹಿತ್ಯ ಪರಿಷತ್ತಿನಷ್ಟೇ ಅಲ್ಲ, ಪ್ರತಿಯೊಬ್ಬರ ಮೆಲಿದೆ. ಪತ್ರಕರ್ತರು ವೇಗಕ್ಕಿಂತ ಸತ್ಯಾಂಶಕ್ಕೆ ಆದ್ಯತೆ ನೀಡಿ, ಪರಿಶೀಲಿತ ಹಾಗೂ ಜವಾಬ್ದಾರಿಯುತ ಸುದ್ದಿಗಳನ್ನು ಪ್ರಕಟಿಸಬೇಕು. ಸಮಾಜವು ಮಾಧ್ಯಮದ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆಯನ್ನು ಪ್ರತಿಯೊಬ್ಬ ಪತ್ರಕರ್ತರೂ ನಿಭಾಯಿಸಬೇಕು." - ಬಲ್ಲಪ್ಪ ನಂದಗಾವಿ ಪೊಲೀಸ್ ಉಪಾಧೀಕ್ಷಕರು ಭಾಲ್ಕಿ ಉಪವಿಭಾಗ
ವರದಿ: ಸಂತೋಷ ಬಿಜಿ ಪಾಟೀಲ


