ಬೆಳಗಾವಿ: ಗಣೇಶ ಚತುರ್ಥಿಯಂದು ಬೆಳಗಾವಿನಗರದ ಚವ್ಹಾಟ ಗಲ್ಲಿಯಲ್ಲಿ ನಡೆದಿದ್ದ ಭೀಕರ ಅಗ್ನಿ ಅವಘಡದಲ್ಲಿ ದಮೋನೆ ಕುಟುಂಬದ ಆರು ಜನರು ಸಜೀವ ದಹನಗೊಂಡಿದ್ದ ದುರಂತ ಪ್ರಕರಣಕ್ಕೆ ಈಗ ಸ್ಪೋಟಕ ತಿರುವು ಸಿಕ್ಕಿದೆ. ಆರಂಭದಲ್ಲಿ ಶಾರ್ಟ್ ಸರ್ಕ್ಯೂಟ್ ಹಾಗೂ ಫ್ರಿಡ್ಜ್ ಬ್ಲಾಸ್ಟ್ನಿಂದ ಈ ಅನಾಹುತ ಸಂಭವಿಸಿದೆ ಎಂದು ಶಂಕಿಸಲಾಗಿತ್ತು.
ಆದರೆ, ಘಟನೆಗೂ ಕೆಲವೇ ಕ್ಷಣಗಳ ಮುನ್ನ ಮನೆ ಬಳಿ ಅನುಮಾನಾಸ್ಪದವಾಗಿ ಓಡಾಡಿದ ವ್ಯಕ್ತಿಯ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು, ಇದು ಕೊಲೆಯೋ ಅಥವಾ ಬೆಂಕಿ ಹಚ್ಚಿದ ಕೃತ್ಯವೋ ಎಂಬ ಗಂಭೀರ ಅನುಮಾನ ಹುಟ್ಟುಹಾಕಿದೆ.
ಸೆಪ್ಟೆಂಬರ್ 15ರ ಮಧ್ಯರಾತ್ರಿ 1.58ರ ಸುಮಾರಿಗೆ ಕೈಯಲ್ಲಿ ಬಕೆಟ್ ಹಿಡಿದುಕೊಂಡು ಬಂದ ಅಗಂತುಕನೊಬ್ಬ ಗಜಾನನ ದಮೋನೆ ಅವರ ಮನೆ ಬಳಿ ಎಂಟ್ರಿ ಕೊಟ್ಟಿದ್ದಾನೆ.
ಕೇವಲ ಎರಡೇ ನಿಮಿಷದಲ್ಲಿ ಅಂದರೆ ರಾತ್ರಿ 2:00 ಗಂಟೆಗೆ ಆತ ಕೈಯಲ್ಲಿದ್ದ ಬಕೆಟ್ ಇಲ್ಲದೆಯೇ ಅಲ್ಲಿಂದ ಕಂಗಾಲಾಗಿ ಓಡಿ ಹೋಗಿ ಪರಾರಿಯಾಗಿದ್ದಾನೆ. ಆತ ಪರಾರಿಯಾದ ಎರಡೇ ನಿಮಿಷಗಳಲ್ಲಿ ಇಡೀ ಮನೆ ಸಂಪೂರ್ಣವಾಗಿ ಹೊತ್ತಿ ಉರಿದಿದೆ.
ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗುತ್ತಿದ್ದಂತೆಯೇ ಮಾರ್ಕೆಟ್ ಠಾಣೆ ಪೊಲೀಸರು ದಾಮೋನೆ ನಿವಾಸಕ್ಕೆ ದೌಡಾಯಿಸಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಅಗಂತುಕ ತಂದಿದ್ದ ಬಕೆಟ್ ಎಲ್ಲಿದೆ ಎಂಬುದರ ಹುಡುಕಾಟ ನಡೆಸುತ್ತಿದ್ದು, ಅಕ್ಕಪಕ್ಕದ ನಿವಾಸಿಗಳಿಂದಲೂ ಮತ್ತೊಮ್ಮೆ ವಿವರವಾದ ಮಾಹಿತಿ ಕಲೆಹಾಕುತ್ತಿದ್ದಾರೆ.
ಪ್ರಸ್ತುತ ಪೊಲೀಸರು ಈ ಪ್ರಕರಣವನ್ನು ಶಾರ್ಟ್ ಸರ್ಕ್ಯೂಟ್ ಅಪಘಾತ ಹಾಗೂ ರಹಸ್ಯಾತ್ಮಕ ವ್ಯಕ್ತಿಯ ಅನುಮಾನಾಸ್ಪದ ಓಡಾಟ – ಹೀಗೆ ಎರಡು ಪ್ರಮುಖ ಆಯಾಮಗಳಲ್ಲಿ ತೀವ್ರ ತನಿಖೆಗೆ ಒಳಪಡಿಸಿದ್ದಾರೆ.


