ಅಥಣಿ: ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗಿ ಸಂಸ್ಥೆಗೆ ಹಸ್ತಾಂತರಿಸುವ ಸಾಧ್ಯತೆಯ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಘಟಕ ಅಥಣಿಯಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿತು. ಈ ಕುರಿತು ರೈತರು ಮತ್ತು ಸಂಘದ ಮುಖಂಡರು ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಖಾಸಗೀಕರಣದ ನಿರ್ಧಾರವನ್ನು ಕೈಬಿಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಮಹಾದೇವ ಮಡಿವಾಳ, ಹೆಸ್ಕಾಂನಂತಹ ಸಾರ್ವಜನಿಕ ವಲಯದ ಸಂಸ್ಥೆಯನ್ನು ಖಾಸಗಿ ಕಂಪನಿಗಳಿಗೆ ವಹಿಸುವುದರಿಂದ ರೈತರು, ಸಾಮಾನ್ಯ ಗ್ರಾಹಕರು ಹಾಗೂ ನೌಕರರ ಹಿತಾಸಕ್ತಿಗೆ ಗಂಭೀರ ಧಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಗ್ರಾಮೀಣ ಭಾಗದ ರೈತರು ಮತ್ತು ಬಡ ಕುಟುಂಬಗಳು ಸರ್ಕಾರದಿಂದ ದೊರೆಯುವ ವಿವಿಧ ಸಬ್ಸಿಡಿ ಸೌಲಭ್ಯಗಳ ಮೇಲೆ ಅವಲಂಬಿತರಾಗಿದ್ದು, ಖಾಸಗೀಕರಣದಿಂದ ಈ ಸೌಲಭ್ಯಗಳು ಕಡಿಮೆಯಾಗುವ ಅಥವಾ ಸಂಪೂರ್ಣವಾಗಿ ರದ್ದಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ವಿದ್ಯುತ್ ಕಂಬಗಳು, ಮಾರ್ಗಗಳು ಹಾಗೂ ಇತರೆ ಮೂಲಸೌಕರ್ಯಗಳನ್ನು ಖಾಸಗಿ ಕಂಪನಿಗಳಿಗೆ ಬಳಸಲು ಅವಕಾಶ ನೀಡುವುದು ಸಾರ್ವಜನಿಕ ಆಸ್ತಿಯ ದುರುಪಯೋಗಕ್ಕೆ ಕಾರಣವಾಗಬಹುದು ಎಂದು ಅವರು ಅಭಿಪ್ರಾಯಪಟ್ಟರು. ಜೊತೆಗೆ ಹೆಸ್ಕಾಂನಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಹಾಗೂ ಕಾರ್ಮಿಕರ ಉದ್ಯೋಗ ಭದ್ರತೆಯ ಮೇಲೂ ಖಾಸಗೀಕರಣದ ಪರಿಣಾಮ ಬೀಳುವ ಸಾಧ್ಯತೆ ಇದೆ ಎಂದು ಹೇಳಿದರು.
ಜೀವದ ಹಂಗನ್ನು ತೊರೆದು ಜನರಿಗೆ ನಿರಂತರ ಸೇವೆ ನೀಡುತ್ತಿರುವ ಸಿಬ್ಬಂದಿಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು. ಯಾವುದೇ ಕಾರಣಕ್ಕೂ ಹೆಸ್ಕಾಂ ಅನ್ನು ಖಾಸಗಿ ಕಂಪನಿಗೆ ವಹಿಸಬಾರದು. ಒಂದು ವೇಳೆ ಸರ್ಕಾರ ಖಾಸಗೀಕರಣ ಜಾರಿಗೆ ಮುಂದಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಂಘದ ಮುಖಂಡರು ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ಕಿರಣ ಮಿಸಾಳ, ಗ್ರಾಮ ಅಧ್ಯಕ್ಷ ರಮೇಶ್ ಕುಂಬಾರ, ಜಿ.ಗೌ. ಅಧ್ಯಕ್ಷ ಮಹಮ್ಮದ್ ಜಮಾಲ್ ಸೇರಿದಂತೆ ಹಲವು ಮುಖಂಡರು, ರೈತರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ವರದಿ -ಅಜಯ ಕಾಂಬಳೆ

