ತುರುವೇಕೆರೆ: ತಾಲೂಕಿನ ಮಾಯಸಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇತ್ತೀಚಿಗೆ ಅಗಲಿದ ಗಾನ ಕೋಗಿಲೆ ಎಸ್.ಜಾನಕಿ ಅವರಿಗೆ ಗಾನಾಂಜಲಿ ಮೂಲಕ ಭಾವಪೂರ್ಣ ನಮನ ಸಲ್ಲಿಸಲಾಯಿತು.
ಗಾನಾಂಜಲಿ ಕಾರ್ಯಕ್ರಮದಲ್ಲಿ ಹತ್ತಾರು ಮಹಿಳೆಯರು ಜಾನಕಮ್ಮ ಹಾಡಿರುವ ಗೀತೆಗಳನ್ನು ಹಾಡುವ ಮೂಲಕ ಗಾಯನ ಲೋಕಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದರು.
‘ನೀ ಮೀಟಿದ.., ಕಂಗಳು ವಂದನೆ ಹೇಳಿವೆ.., ಜೀವ ವೀಣೆ ನೀಡು..., ಬಣ್ಣ ನನ್ನ ಒಲವಿನ ಬಣ್ಣ..., ಬಾನಲ್ಲೂ ನೀನೆ... ಭುವಿಯಲ್ಲೂ ನೀನೆ...‘ ಹಾಗೂ ಎಸ್.ಜಾನಕಿ ಅವರು ಹಾಡಿದ ಚಲನಚಿತ್ರ ಗೀತೆ, ಭಾವಗೀತೆ, ಭಕ್ತಿಗೀತೆಗಳ ಸಾಲು ಸಾಲು ಮಾಧುರ್ಯದ ಗೀತೆಗಳು ಕೇಳುಗರನ್ನು ಸಂಗೀತದ ಅಲೆಯಲ್ಲಿ ತೇಲಿಸಿದವು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಯಸಂದ್ರ ಕಸಾಪ ಅಧ್ಯಕ್ಷ ಮುನಿರಾಜು ಮಾತನಾಡಿ, ಎಸ್.ಜಾನಕಿ ಅವರ ಸುದೀರ್ಘ ಪಯಣ ಭಾರತೀಯ ಚಿತ್ರರಂಗ ಹಾಗೂ ಗಾಯನಪ್ರಪಂಚದಲ್ಲಿ ಅಳಿಸಲಾಗದ ಇತಿಹಾಸವನ್ನು ನಿರ್ಮಿಸಿದೆ. ತಮ್ಮ ಸುಮಧುರ ಕಂಠದಿಂದ ಹಾಡಿದ ಸಹಸ್ರಾರು ಗೀತೆಗಳ ಮೂಲಕ ಕೋಟ್ಯಾಂತರ ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದರು.
ಸಂಸ್ಥಾಪಕ ಅಧ್ಯಕ್ಷ ಎನ್.ಆರ್.ಜಯರಾಮ್, ಮಹಿಳಾ ಸಂಘದ ಅಧ್ಯಕ್ಷೆ ಆನಂದಮದನ ಕುಮಾರ್, ಉಪಾಧ್ಯಕ್ಷೆ ಲೀಲಾವತಿ ಗಿಡ್ಡಯ್ಯ, ಸಿ.ಎನ್. ನಂಜುಂಡಪ್ಪ, ಪುಟ್ಟೇಗೌಡ, ಕರಿಬಸಪ್ಪ, ರಾಧಾಕೃಷ್ಣ, ರೆಹಮತ್ ಉಲ್ಲಾ, ನವೀನ್, ಶೈಲಾ ಪ್ರಸಾದ್, ಆಶಾಜಿನಚಂದು, ಅಂಜಲಿ ಭಾನುಪ್ರಕಾಶ್, ವಿಜಯ ವಸಂತರಾಜ್ ಸೇರಿದಂತೆ ಹಲವರು ಎಸ್. ಜಾನಕಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ವರದಿ: ಗಿರೀಶ್ ಕೆ ಭಟ್


