ಕಾಗವಾಡ : ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಭಾಗವಾದ ಕಾಗವಾಡ ಪಟ್ಟಣದ ಐತಿಹಾಸಿಕ ಕಾರಹುಣ್ಣಿಮೆ ರವಿವಾರ ಸಂಜೆ ಜರುಗಿತು.
ಇದರಲ್ಲಿ ಪಟ್ಟಣದ ಗೌಡರ ಮನೆತನದ ಎತ್ತು ಪ್ರಥಮವಾಗಿ ಕರಿ ಹರಿಯುವಲ್ಲಿ ಯಶಸ್ವಿಯಾಯಿತು. ಬೆಳಿಗ್ಗೆಯಿಂದ ಕರವ ಮನೆತನದ ಯುವಕನೋರ್ವ ಬಾಳಬಟ್ಟಲವೊಂದನ್ನು ಹಿಡಿದುಕೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ವೃಂದ ಗಳೊಂದಿಗೆ ಮೆರವಣಿಗೆ ಮೂಲಕ ಎಲ್ಲ ದೇವಾಲಯಗಳಿಗೆ ಪೂಜೆ ಸಲ್ಲಿಸುತ್ತಾ ಸಂಜೆ ಪಟ್ಟಣ ಪಂಚಾಯತಿ ಎದುರಿಗೆ 15 ಅಡಿ ಎತ್ತರದ ಮುಳ್ಳಿನ ಬನ್ನಿಯ ಕಂಟಿಯನ್ನು ಒಟ್ಟಿ ಅದರ ಮೇಲಿಂದ ಮೂರು ಎತ್ತುಗಳನ್ನು ಓಡಿಸಲಾಯಿತು. ಇದರಲ್ಲಿ ಗೌಡರ ಮನೆತನದ ಎರಡು ಎತ್ತುಗಳು ಹಾಗೂ ಕರವ ಮನೆತನದ ಒಂದು ಎತ್ತು ಪಾಲ್ಗೊಂಡಿತ್ತು.
ಕಾಗವಾಡ ಪಟ್ಟಣದಲ್ಲಿ ಸಂಭ್ರಮದ ಐತಿಹಾಸಿಕ ಕಾರಹುಣ್ಣಿಮೆ ಆಚರಣೆ
ಈ ಕರಿ ಹರಿಯುವ
ಕಾರ್ಯಕ್ರಮದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ
ರಾಜ್ಯದ ಸಾವಿರಾರು ಜನರು ವಿಕ್ಷಿಸಲು ಆಗಮಿಸಿದ್ದು,
ಈ ಕರಿ ಹರಿಯುವ ಉಸ್ತುವಾರಿಯನ್ನು ಸಮೀರ
ಪಟವರ್ಧನ ಸರಕಾರ ಅವರ ನೇತೃತ್ವದಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರವಿಂದ್ರ ಹಾದಿಮನಿ, ಜ್ಯೋತಿಕುಮಾರ ಪಾಟೀಲ, ಸೌರಭ ಪಾಟೀಲ, ಆಜೀತ ಕರವ, ಕಾಕಾ ಪಾಟೀಲ, ಪ್ರಕಾಶ ಪಾಟೀಲ, ವೃಷಭ ಚೌಗಲ್, ಆದಿನಾಥ ಕರವ, ರಾಜು ಕರವ, ಅಶೋಕ್ ಪಾಟೀಲ, ಪವನ್ ಪಾಟೀಲ್, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಯಾವುದೇ ಆಹಿತಕರ ಘಟನೆ ನಡೆಯದಂತೆ, ಅಥಣಿ ಸಿ ಪಿ ಐ ಸಂತೋಷ್ ಹಳ್ಳೂರ್ ನೇತೃತ್ವದಲ್ಲಿ ಪಿಎಸ್ಐ ರಾಘವೇಂದ್ರ ಖೋತ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.ಕಾರ ಹುಣ್ಣಿಮೆಯ ಕರಿ ಹರಿಯುವುದೆಂದರೆ ರೈತರಿಗೆ ಸಡಗರವೋ ಸಡಗರ ಇದು ರೈತನ ಬದುಕಿಗೆ ಹೊಸತನವನ್ನು ತರುವ ಹಬ್ಬ, ಕರ್ನಾಟಕದಾದ್ಯಂತ ಕಾರ ಹುಣ್ಣಿಮೆಯನ್ನು ಆಚರಿಸುತ್ತಾರೆ. ಆದರೆ ಕಾಗವಾಡದಲ್ಲಿ ಈ ಹಬ್ಬವನ್ನು ಆಚರಿಸುವ ರೀತಿ ಈ ಹಬ್ಬದ ಪರಿಕಲ್ಪನೆ ಬೇರೆಯೇ ಇದೆ. ಉತ್ತರ ಕರ್ನಾಟಕದಲ್ಲಿ ಕಾರ ಹುಣ್ಣಿಮೆಯು ದನಗಳ ಹಬ್ಬವೆಂದು ಪ್ರಸಿದ್ಧವಾದರೆ, ಕಾಗವಾಡದಲ್ಲಿ ಇದು ಜನರ ಹಬ್ಬ ಎಂದು ಆಚರಿಸುತ್ತಾರೆ.
ಪ್ರತಿ ವರ್ಷ ಶ್ರಾವಣ ಮಾಸದ ಮೂಲಾ ನಕ್ಷತ್ರದ ದಿನ ಇಲ್ಲಿ ಕರಿ ಹರಿಯುವುದು ವಿಶಿಷ್ಟವಾದ ಒಂದು ಸಾಂಸ್ಕೃತಿಕ ಹಬ್ಬ, ಈ ಹಬ್ಬದ ದಿನ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಭಾಗದ, ಮಿರಜ, ಸಾಂಗಲಿ, ಸಾತಾರಾ, ಕೊಲ್ಲಾಪೂರ, ಇಚಲಕರಂಜಿ, ಜಮಖಂಡಿ, ಅಥಣಿ, ಚಿಕ್ಕೋಡಿ, ರಾಯಬಾಗ, ಗೋಕಾಕ ಸೇರಿದಂತೆ ಗಡಿಭಾಗದ ಎಲ್ಲ ನಗರ ಪಟ್ಟಣಗಳಿಂದ ಸಾವಿರಾರು ಜನರು ಆಗಮಿಸುತ್ತಾರೆ.
ಸಂಜೆ ಪಟ್ಟಣ ಪಂಚಾಯತಿ ಆವರಣದಲ್ಲಿ
ಜನಸ್ತೋಮ ನೆರೆದಿದ್ದು, ಎತ್ತುಗಳಿಗೆ ಮೈತುಂಬ ಕೆಂಪು ಬಣ್ಣ ಬಳಿದು, ಒಂದೊಂದ ಎತ್ತಿಗೆ 5 ಜನರಂತೆ 15 ಜನ ಬಲಿಷ್ಟ ಯುವಕರು ಬರಿ ಮೈಯಿಂದ ವಾದ್ಯ ವೃಂದಗಳೊಂದಿಗೆ ಕೇಕೇ ಹಾಕುತ್ತಾ ಬರುತ್ತಿದ್ದಂತೆ ಸಾಕು ನಾ ಮುಂದು, ತಾ ಮುಂದು ಎಂದು ಎತ್ತುಗಳನ್ನು ಓಡಿಸುತ್ತಾರೆ. ಯುವಕರು ತಮ್ಮ ಜೀವದ ಹಂಗು ತೊರೆದು ಪಾಲ್ಗೊಂಡಿದ್ದರು. ಯಾವ ಎತ್ತು ಕರಿ ಹರಿಯಿತೆಂಬ ಕುತುಹಲ ನೋಡುಗರ ಕಣ್ಣಲ್ಲಿ ಮೋಡಿ ಮಾಡುವುದರಲ್ಲಿಯೇ ಕರಿ ಹರಿದು ಮುಗಿಯುವುದು. ಅದಾದ ಬಳಿಕ ಮತ್ತೇ ಗೌಡರ 2 ಎತ್ತು ಮನೆತನದ ಹಿರಿಯರು ಚಾವಡಿಗೆ ಬಂದು ಪಟವರ್ಧನ ಸರ್ಕಾರ ಇವರಿಗೆ ಮುಜರೆ ಕೊಟ್ಟು ಎಲೆ, ಅಡಿಕೆ ತೆಗೆದುಕೊಂಡು ಮರಳಿ ಹೋಗುತ್ತಾರೆ.
ಗೌಡರ ಮನೆತನದ ಪೊಲೀಸ ಪಾಟೀಲರಾದ ದಿ.ಕಾಕಾ ಪಾಟೀಲರ ಮನೆತನಕ್ಕೆ ಹಿರಿತನವಿದೆ. ಇವರ ಎರಡು ಎತ್ತುಗಳು ಹಾಗೂ ಕರವ ಮನೆತನದ ಒಂದು ಎತ್ತು ಹಾಗೂ ಗ್ರಾಮಸ್ಥರೆಲ್ಲರೂ ಕೂಡಿಕೊಂಡು ಶ್ರದ್ಧೆ, ಭಕ್ತಿಯಿಂದ ಜಾತಿ, ಮತ, ಭೇದ ಮರೆತು, ಕಾರ ಹುಣ್ಣಿಮೆಯನ್ನು ವಿಶಿಷ್ಟ ರೀತಿಯಿಂದ ಆಚರಿಸಿದರು.
ವರದಿ : ಚಂದ್ರಕಾಂತ ಕಾಂಬಳೆ


