ತುರುವೇಕೆರೆ : ತಾಲ್ಲೂಕಿನ ಮಾಯಸಂದ್ರದ ಎನ್. ಕೆಂಪಯ್ಯ ಬಯಲು ರಂಗಮಂದಿರ ಆವರಣದಲ್ಲಿ ಆಗಸ್ಟ್ 15 ರಂದು ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸೌರಭ ಕಾನ್ವೆಂಟಿನ ವಿದ್ಯಾರ್ಥಿಗಳು ಪಥಸಂಚಲನದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ತಾಲ್ಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ ಸುರೇಶ್ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ಬಂದು 80 ವರ್ಷಗಳಾಗಿದೆ. ಭಾರತ ದೇಶವನ್ನು ಸ್ವಾತಂತ್ರ್ಯಗೊಳಿಸಲು ಸಾಕಷ್ಟು ಮಹನೀಯರು ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಆ ಮಹನೀಯರ ಆದರ್ಶನೀಯ ಗುಣಗಳು, ದೇಶಪ್ರೇಮ ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ. ಮಕ್ಕಳೇ ಈ ದೇಶದ ಮುಂದಿನ ಭವಿಷ್ಯವಾಗಿದ್ದು, ಈ ನಿಟ್ಟಿನಲ್ಲಿ ಪೋಷಕರು, ಶಿಕ್ಷಕರು ತಮ್ಮ ಮಕ್ಕಳಿಗೆ ಸಂಸ್ಕಾರದ ಜೊತೆಗೆ ದೇಶಪ್ರೇಮದ ಕಿಚ್ಚನ್ನು ಮನದಲ್ಲಿ ಹೊತ್ತಿಸಬೇಕೆಂದರು.

ಸಮಾರಂಭದಲ್ಲಿ ಸೌರಭ ಕಾನ್ವೆಂಟಿನ ವಿದ್ಯಾರ್ಥಿಗಳು ಪಥಸಂಚಲನಕ್ಕೆ ಪ್ರಥಮ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದ್ವಿತೀಯ ಸ್ಥಾನ, ಛದ್ಮವೇಶದ ಭಾರತಾಂಬೆಯ ಪಾತ್ರದಾರಿ ಮೌನಶ್ರೀ ಪ್ರಥಮ, ವಂದೇ ಮಾತರಂ, ರಾಷ್ಟ್ರಗೀತೆ, ಝಂಡಾಗೀತೆ, ರೈತಗೀತೆ ಗಾಯನಕ್ಕೆ ಪ್ರಥಮ ಸ್ಥಾನಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಕಬ್ ಮತ್ತು ಬುಲ್ ಬುಲ್ ವಿದ್ಯಾರ್ಥಿಗಳ ಪ್ರಭಾತ್ ಭೇರಿ, ಎಲ್.ಕೆ.ಜಿ., ಯುಕೆಜಿ, 1 ರಿಂದ 7ನೇ ತರಗತಿಯ ವಿದ್ಯಾರ್ಥಿಗಳು ಸ್ವಾತಂತ್ರ ಹೋರಾಟಗಾರರ ವೇಷಭೂಷಣದೊಂದಿಗೆ ವಿಶೇಷ ಟ್ಯಾಬ್ಲೋ ಮೂಲಕ ಮೆರವಣಿಗೆ ನಡೆಸಿ ದೇಶಪ್ರೇಮ ಮೆರೆದಿದ್ದು, ನಾಗರೀಕರ ಗಮನಸೆಳೆಯಿತು.
ಕಾರ್ಯಕ್ರಮದಲ್ಲಿ ಸೌರಭ ಕಾನ್ವೆಂಟಿನ ಕಾರ್ಯದರ್ಶಿ ಕಲ್ಪನಾಮುನಿರಾಜು, ಮುಖ್ಯ ಶಿಕ್ಷಕ ಮುನಿರಾಜು, ಶಿಕ್ಷಕರಾದ ಲಲಿತಾ ಭಟ್, ಸೌಮ್ಯ, ಪ್ರಭಾ, ನುಸ್ರತ್ ಝಬಿನ್, ನಜೀಮಾ ಮುಂತಾದವರಿದ್ದರು.
ವರದಿ: ಗಿರೀಶ್ ಕೆ ಭಟ್


