ತುರುವೇಕೆರೆ: ಪಟ್ಟಣದ ಗೆಳೆಯರ ಬಳಗ ಆಶ್ರಯದ ಜೆಪಿ ಕಾನ್ವೆಂಟ್ ಮತ್ತು ಆಂಗ್ಲ ಪ್ರೌಢಶಾಲೆಯಲ್ಲಿ ಇಂದು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಥೆಯ ಶೈಕ್ಷಣಿಕ ಆಡಳಿತಾಧಿಕಾರಿ ಕೃಷ್ಣಯ್ಯ ಮಾತನಾಡಿ, ಮಕ್ಕಳಿಗೆ ಶ್ರೀಕೃಷ್ಣನ ಬಾಲಲೀಲೆಗಳು, ಧರ್ಮಪರವಾದ ನಿಲುವು, ಬಲರಾಮ ಕೃಷ್ಣರ ಸಹೋದರತ್ವ, ಕೃಷ್ಣ ಅರ್ಜುನರ ಬಾಂದವ್ಯ, ಮಹಾಭಾರತದಲ್ಲಿ ಕೌರವರೊಂದಿಗಿನ ಕೃಷ್ಣನ ಸಂಧಾನ, ಕುರುಕ್ಷೇತ್ರ ಯುದ್ಧದಲ್ಲಿ ಭಗವದ್ಗೀತೆ ಬೋಧನೆ, ಧರ್ಮ ಸಂಸ್ಥಾಪನೆಯಲ್ಲಿ ಕೃಷ್ಣನ ಪಾತ್ರದ ಬಗ್ಗೆ ಕಥೆಗಳ ಮೂಲಕ ಸ್ವಾರಸ್ಯಕರ ರೀತಿಯಲ್ಲಿ ಮಕ್ಕಳಿಗೆ ತಿಳಿಸಿಕೊಟ್ಟರು.
ಗೆಳೆಯರ ಬಳಗದ ಕಾರ್ಯದರ್ಶಿ ಜಿ.ಆರ್.ರಂಗೇಗೌಡ ಅಧ್ಯಕ್ಷತೆ ವಹಿಸಿದ್ದರು. ಎಲ್.ಕೆ.ಜಿ. ಇಂದ ಒಂದನೇ ತರಗತಿವರೆಗಿನ ನೂರಾರು ಮಕ್ಕಳು ರಾಧಾಕೃಷ್ಣರ ವೇಷಭೂಷಣ ತೊಟ್ಟು ಸಂಭ್ರಮಿಸಿದರು.ಸಹಕಾರ್ಯದರ್ಶಿ ಲಕ್ಷ್ಮೀನರಸಿಂಹ, ನಿರ್ದೇಶಕರಾದ ಟಿಎವಿ ಗುಪ್ತ, ಬೆಂಜಮಿನ್ ಪಾಲ್, ಮುಖ್ಯ ಶಿಕ್ಷಕ ತುಕಾರಾಮ್, ಓಂಕಾರಮೂರ್ತಿ ಹಾಗೂ ಬೋಧಕ, ಬೋಧಕೇತರ ವರ್ಗ, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್


