ಧಾರವಾಡ: ಅನಾರೋಗ್ಯದಿಂದ ಬಳಲುತ್ತಿದ್ದ ಮಗ ಆತ್ಮಹತ್ಯೆಗೆ ಶರಣಾದ ಸುದ್ದಿ ಕೇಳಿ ಆಘಾತಗೊಂಡ ತಾಯಿ ಶಾಕ್ ನಿಂದ ಸಾವನ್ನಪ್ಪಿರುವ ಘಟನೆ ಧಾರವಾಡ ನಗರದ ತೇಜಸ್ವಿ ನಗರದಲ್ಲಿ ನಡೆದಿದೆ.
ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಗ ಮೆಹಬೂಬ್ ಸಾಬ್ ನದಾಫ್ (47) ಬುಧವಾರ ಬೆಳಗ್ಗೆ ಧಾರವಾಡ ನಗರದ ರಾಜೀವ್ ಗಾಂಧಿನಗರದ ಬಳಿ ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು.
ರೈಲ್ವೆ ಪೊಲೀಸರು ಈ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಿದ್ದರು. ಮೆಹಬೂಬ್ ಶವ ಮರಣೋತ್ತರ ಪರೀಕ್ಷೆ ಮುಗಿಸಿ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿತ್ತು. ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದಾಗಲೇ ಮೆಹಬೂಬ್ ತಾಯಿ ಶಾಕ್ ಆಗಿದ್ದಾರೆ.
ಅಂತ್ಯಕ್ರಿಯೆಗೆ ಮನೆಯಿಂದ ಮಗನ ಮೃತದೇಹ ತೆಗೆದುಕೊಂಡು ಹೋಗುತಿದ್ದಂತೆ ತಾಯಿ ಮುಗುಟಬಿ ನದಾಫ್ (68) ಕೂಡ ಸಾವನ್ನಪ್ಪಿದ್ದಾರೆ. ಮಗನ ಅಂತ್ಯಕ್ರಿಯೆ ಮುಗಿಸಿ ಬಂದ ಕುಟುಂಬದವರು ಹಾಗೂ ಸಂಬಂಧಿಕರು ಬಳಿಕ ತಾಯಿಯ ಅಂತ್ಯಕ್ರಿಯೆಯನ್ನೂ ನೆರವೇರಿಸಿದ್ದಾರೆ.


