ವಿಜಯಪುರ:ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಯ ಪ್ರವೇಶ ಪರೀಕ್ಷೆ ವೇಳೆ ವಿಜಯಪುರ ಜಿಲ್ಲೆಯ ತಿಕೋಟ ಪಟ್ಟಣದ ಶಾರದಾಂಬಾ ಶಿಕ್ಷಣ ಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ಭಾನುವಾರ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪ್ರಶ್ನೆ ಪತ್ರಿಕೆ ಹಾಗೂ ಒಎಂಆರ್ ಶೀಟ್ ವಿತರಣೆಯಲ್ಲಿ ವಿಳಂಬವಾಗಿದೆ ಹಾಗೂ ಎರಡರ ಸೀರಿಯಲ್ ಸಂಖ್ಯೆಗಳು ಹೊಂದಿಕೆಯಾಗಿಲ್ಲ ಎಂದು ಆರೋಪಿಸಿದ ಕೆಲ ಪರೀಕ್ಷಾರ್ಥಿಗಳು ಪರೀಕ್ಷೆಯನ್ನು ಬಹಿಷ್ಕರಿಸಿ, ಒಎಂಆರ್ ಶೀಟ್ ಸಮೇತ ಕೇಂದ್ರದಿಂದ ಹೊರಬಂದು ಪ್ರತಿಭಟನೆ ನಡೆಸಿದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಆನಂದ ಕೆ. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಪ್ರಶ್ನೆ ಪತ್ರಿಕೆ ಹಾಗೂ ಒಎಂಆರ್ ಶೀಟ್ಗಳನ್ನು ನಿಗದಿತ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ತರಲಾಗಿದ್ದು, ಅಭ್ಯರ್ಥಿಗಳ ಸಮ್ಮುಖದಲ್ಲೇ ಕಾನೂನು ಪ್ರಕ್ರಿಯೆಯಂತೆ ಪ್ಯಾಕೆಟ್ ತೆರೆಯಲಾಗಿದೆ ಎಂದು ಸ್ಪಷ್ಟಪಡಿಸಿದರು.
ಪ್ರಶ್ನೆ ಪತ್ರಿಕೆ ಹಾಗೂ ಒಎಂಆರ್ ಶೀಟ್ನ ಸೀರಿಯಲ್ ಸಂಖ್ಯೆಗಳು ಒಂದೇ ಇರಲಿಲ್ಲ ಎಂಬ ಕಾರಣಕ್ಕೆ ಕೆಲ ಅಭ್ಯರ್ಥಿಗಳು ಗೊಂದಲ ಸೃಷ್ಟಿಸಿ ಪರೀಕ್ಷೆ ಬರೆಯುವುದಿಲ್ಲ ಎಂದು ಹೊರ ನಡೆದಿದ್ದಾರೆ. ಒಎಂಆರ್ ಶೀಟ್ ಮತ್ತು ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆಗಳು ಒಂದೇ ಇರಬೇಕೆಂಬ ನಿಯಮವಿಲ್ಲ. ಅಭ್ಯರ್ಥಿಗಳು ತಮ್ಮ ಪ್ರಶ್ನೆ ಪತ್ರಿಕೆಯ ವರ್ಶನ್ ಕೋಡ್ ಅನ್ನು ಒಎಂಆರ್ ಶೀಟ್ನಲ್ಲಿ ನಮೂದಿಸಿ ಪರೀಕ್ಷೆ ಮುಂದುವರಿಸಬಹುದಾಗಿತ್ತು. ಪ್ರಶ್ನೆ ಪತ್ರಿಕೆ ಹಾಗೂ ಒಎಂಆರ್ ಶೀಟ್ಗೆ ಟ್ಯಾಗಿಂಗ್ ಅಥವಾ ಬಾಂಡಿಂಗ್ ವ್ಯವಸ್ಥೆಯೂ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಕೇಂದ್ರದ ಮುಖ್ಯಸ್ಥರು ಮನವೊಲಿಸಿದರೂ ಕೆಲ ಅಭ್ಯರ್ಥಿಗಳು ಪರೀಕ್ಷಾ ಆವರಣದಿಂದ ಹೊರಗೆ ತೆರಳಿದ್ದಾರೆ. ಒಮ್ಮೆ ಪರೀಕ್ಷಾ ಕೇಂದ್ರದಿಂದ ಹೊರಬಂದ ಬಳಿಕ ಮರುಪ್ರವೇಶಕ್ಕೆ ಅವಕಾಶವಿಲ್ಲ ಎಂಬುದು ಪರೀಕ್ಷಾ ನಿಯಮವಾಗಿದ್ದು, ಕೊನೆಯ ಗಂಟೆ ಮೊಳಗುವವರೆಗೆ ಅಭ್ಯರ್ಥಿಗಳು ಹೊರಗೆ ಬರಬಾರದು ಎಂಬ ಸೂಚನೆ ಇದೆ ಎಂದು ಅವರು ತಿಳಿಸಿದರು.
ಕೇಂದ್ರದಲ್ಲಿ 115ಕ್ಕೂ ಹೆಚ್ಚು ಅಭ್ಯರ್ಥಿಗಳು ಯಾವುದೇ ಅಡಚಣೆಯಿಲ್ಲದೆ ಪರೀಕ್ಷೆ ಬರೆದಿದ್ದಾರೆ. ಒಎಂಆರ್ ಶೀಟ್ ಹಾಗೂ ಪ್ರಶ್ನೆ ಪತ್ರಿಕೆಗಳನ್ನು ತೆಗೆದುಕೊಂಡು ಹೊರಹೋದ ಕೆಲ ಅಭ್ಯರ್ಥಿಗಳು ನಂತರ ಮತ್ತೆ ಒಳಗೆ ಬಿಡುವಂತೆ ಮನವಿ ಮಾಡಿದರೂ, ಪರೀಕ್ಷಾ ನಿಯಮದ ಪ್ರಕಾರ ಅದಕ್ಕೆ ಅವಕಾಶ ನೀಡಲಾಗಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಇದರ ಸಮಗ್ರ ವರದಿಯನ್ನು ಪರೀಕ್ಷಾ ಮಂಡಳಿಗೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಆನಂದ ಕೆ. ಮಾಹಿತಿ ನೀಡಿದರು.


