ಬೆಂಗಳೂರು: ಕೂಡ್ಲುಗೇಟ್ನಲ್ಲಿರುವ ಎಸ್ಎನ್ಎಸ್ ಎಸ್ಟೇಟ್ ಒಡೆತನದ 18 ಅಂತಸ್ತಿನ ಕಟ್ಟಡವನ್ನು ವ್ಯವಸ್ಥಿತವಾಗಿ ತೆರವುಗೊಳಿಸುವ ಪ್ರಕ್ರಿಯೆಯು ಶುಕ್ರವಾರದಿಂದ ಪ್ರಾರಂಭವಾಗಿದೆ.
ಬೆಂಗಳೂರಿನ ಅತ್ಯಂತ ಗಮನ ಸೆಳೆದಿರುವ ವಸತಿ ಪುನರ್ನಿರ್ಮಾಣ ಯೋಜನೆಗಳಲ್ಲಿ ಒಂದರಲ್ಲಿ ಮಹತ್ವದ ಮೈಲಿಗಲ್ಲಾಗಿ, ಎಸ್ಎನ್ಎನ್ ರಾಜ್ ಕಾರ್ಪ್ ಸಂಸ್ಥೆಯು ಎಚ್ಎಸ್ಆರ್ ಲೇಔಟ್ನಲ್ಲಿರುವ ತನ್ನ ಎಸ್ಎನ್ಎನ್ ರಾಜ್ ಎಟರ್ನಿಯಾ (ಒಟ್ಟು 972 ಮನೆಗಳನ್ನು ಒಳಗೊಂಡಿರುವ ಪ್ರೀಮಿಯಂ ವಸತಿ ಯೋಜನೆ) ಸಂಕೀರ್ಣದ 49 ಅಪಾರ್ಟ್ಮೆಂಟ್ ಘಟಕಗಳನ್ನು ನಿಯಂತ್ರಿತ ವಿಧಾನದಲ್ಲಿ ಕೆಡವುವ ಪ್ರಕ್ರಿಯೆ ಪ್ರಾರಂಭಿಸಿದೆ.
ಸುಮಾರು 200 ಕೋಟಿ ರೂ.ವೆಚ್ಚದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು.
ಈ ಕುರಿತು ಎಸ್ ಎನ್ಎನ್ ಅಪಾರ್ಟ ಮೆಂಟ್ ನಿರ್ದೇಶಕ ಅನೂಜ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಮುಂಬೈನ ಖಾಸಗಿ ಕಂಪನಿಗೆ ತೆರವು ಮಾಡಲು ಗುತ್ತಿಗೆ ಕೊಟ್ಟಿದ್ದೇವೆ. ಯಾವುದೇ ರೀತಿ ಸಮಸ್ಯೆ ಆಗುವುದಿಲ್ಲ. ಫ್ಲ್ಯಾಟ್ ಬೈ ಫ್ಲ್ಯಾಟ್ ತೆರವುಗೊಳಿಸುತ್ತೇವೆ.
ನಾವೇ ಬಿಬಿಎಂಪಿಗೆ ಪತ್ರ ಬರೆದಿದ್ದೇವೆ. ಶುಕ್ರವಾರದಿಂದ ತೆರವು ಕಾರ್ಯ ಆರಂಭವಾಗಿದೆ. ಅಪಾರ್ಟಮೆಂಟ್ ಹೀಗೆ ಇದ್ರೂ ಏನೂ ಆಗಲ್ಲ. ಆದರೆ ನಾವು ಅಪಾರ್ಟ್ ಮೆಂಟ್ ತೆರವು ಗೊಳಿಸುತ್ತೇವೆ.
ಮತ್ತೆ ಇದೇ ಜಾಗದಲ್ಲಿ ಹೊಸ ಅಪಾರ್ಟಮೆಂಟ್ ಕಟ್ಟುತ್ತೇವೆ. ಫ್ಲ್ಯಾಟ್ ಗಳು ಮುಂಚಿತವಾಗಿಯೇ ಮುಂಗಡ ಬುಕ್ ಆಗಿತ್ತು. ಈಗ ನಾವು ಅವರು ಜೊತೆ ಮಾತಾಡಿ ಸರಿಪಡಿಸುತ್ತೇವೆ. ಯಾರಿಗೂ ಸಮಸ್ಯೆ ಆಗದಂತೆ ತೆರವುಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ.


