ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರಿಗೆ ಸಿಹಿಸುದ್ದಿ ಸಿಕ್ಕಿದ್ದು, ಅಕ್ಕಿ ದಾಸ್ತಾನು ಹಾಗೂ ಸಂಗ್ರಹಣಾ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ (NFSA) ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ ಪಡಿತರ ಧಾನ್ಯಗಳನ್ನು ಒಂದೇ ಹಂತದಲ್ಲಿ ವಿತರಿಸಲು ಆಹಾರ ಇಲಾಖೆ ತೀರ್ಮಾನಿಸಿದೆ.
ಕೇಂದ್ರ ಸರ್ಕಾರದ ಪಾಲುದಾರಿಕೆಯ ಈ ಪಡಿತರ ಯೋಜನೆಯಡಿ ಬಿಪಿಎಲ್ ಕಾರ್ಡ್ದಾರರಿಗೆ ತಲಾ 6 ಕೆಜಿ ರಾಗಿ ಮತ್ತು 4 ಕೆಜಿ ಅಕ್ಕಿ ಸಿಗಲಿದೆ.
ಕೇಂದ್ರದಿಂದ ಬೆಂಬಲ ಬೆಲೆ ಯೋಜನೆಯಡಿ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಧಾನ್ಯ ಖರೀದಿ ಮಾಡಿರುವ ಕಾರಣ 2 ತಿಂಗಳ ಪಡಿತರವನ್ನು ಒಟ್ಟಿಗೇ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಪಾಲಿನ ಪಡಿತರವನ್ನು ಸಹ ಇದೇ ಮಾದರಿಯಲ್ಲಿ ವಿತರಿಸಲಾಗುತ್ತದೆ.
ಬಯೋಮೆಟ್ರಿಕ್ ಕಡ್ಡಾಯ, ಕಳ್ಳಸಾಗಣೆ ತಡೆಗೆ ಹೈ ಅಲರ್ಟ್:
ಎರಡು ತಿಂಗಳ ಧಾನ್ಯವನ್ನು ಪಡೆಯಲು ಫಲಾನುಭವಿಗಳು ತಾಂತ್ರಿಕ ದಾಖಲೀಕರಣಕ್ಕಾಗಿ ಎರಡು ಬಾರಿ ಪ್ರತ್ಯೇಕವಾಗಿ ಬಯೋಮೆಟ್ರಿಕ್ ನೀಡುವುದು ಕಡ್ಡಾಯವಾಗಿದೆ. ವಿತರಣೆ ವೇಳೆಯಲ್ಲಿ ಸರ್ವರ್ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಪಡಿತರ ಧಾನ್ಯಗಳ ಕಳ್ಳಸಾಗಣೆ ತಡೆಯಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಪೊಲೀಸ್, ಆಹಾರ ಹಾಗೂ ಕಂದಾಯ ಇಲಾಖೆಗಳ ಸಿಬ್ಬಂದಿ ಒಳಗೊಂಡ ನಿಗಾ ಪಡೆ ರಚಿಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಈ ಬಗ್ಗೆ ಆಯಾ ತಾಲೂಕುಗಳಲ್ಲಿ ಖುದ್ದಾಗಿ ಪರಿಶೀಲಿಸುವಂತೆ ಜಂಟಿ ಹಾಗೂ ಉಪನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದ್ದು, ಪ್ರತಿ ನ್ಯಾಯಬೆಲೆ ಅಂಗಡಿಯಲ್ಲಿ 1967 ಉಚಿತ ಸಹಾಯವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ಪ್ರದರ್ಶಿಸಲು ಆಹಾರ ಇಲಾಖೆ ಕಾರ್ಯದರ್ಶಿ ಎಂ. ಕನಗವಲ್ಲಿ ತಿಳಿಸಿದ್ದಾರೆ.


