ರಾಮನಗರ: ಜಮೀನು ಹಾಗೂ ಹಣಕಾಸಿನ ವಿಚಾರಕ್ಕಾಗಿ 8ಟು ವರ್ಷಗಳ ಹಿಂದೆ, ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ನಿವೃತ್ತ ಪಿಎಸ್ಐ ಸಿದ್ದಲಿಂಗಯ್ಯ ಅವರ ಕತ್ತು ಕೊಯ್ದು ಕೊಲೆ ಮಾಡಿದ್ದ ಇಬ್ಬರಿಗೆ ಇಲ್ಲಿನ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ಹಾಗೂ ತಲಾ ₹1.10 ಲಕ್ಷ ದಂಡ ವಿಧಿಸಿದೆ.
ಸಿದ್ದಲಿಂಗಯ್ಯ ಅವರ ಸ್ನೇಹಿತರಾದ ಬೆಂಗಳೂರಿನ ಸಾರಕ್ಕಿ ಗೇಟ್ ನಿವಾಸಿ ಶಂಕರ್ ಅಲಿಯಾಸ್ ಶಂಕರಯ್ಯ ಹಾಗೂ ಜರಗನಹಳ್ಳಿಯ ನಟರಾಜು ಶಿಕ್ಷೆಗೊಳಗಾದವರು.
ಬೆಂಗಳೂರಿನ ಜರಗನಹಳ್ಳಿಯಲ್ಲಿ ವಾಸವಾಗಿದ್ದ ಮೂಲತಃ ಕನಕಪುರ ತಾಲ್ಲೂಕಿನ ಬೊಮ್ಮನಹಳ್ಳಿವರಾದ ಸಿದ್ದಲಿಂಗಯ್ಯ ಅವರನ್ನು ಇಬ್ಬರೂ 2018ರ ಜೂನ್ 26ರಂದು ಕೊಲೆ ಮಾಡಿದ್ದರು.
ಸ್ನೇಹಿತ ಶಂಕರ್ಗೆ ಸಿದ್ದಲಿಂಗಯ್ಯ ಅವರು ₹30 ಲಕ್ಷ ಸಾಲ ನೀಡಿದ್ದರು. ಜೊತೆಗೆ ಜಮೀನು ವ್ಯವಹಾರವಿತ್ತು. ಹಣ ವಾಪಸ್ ವಿಚಾರವಾಗಿ ಸಿದ್ದಲಿಂಗಯ್ಯ ಮತ್ತು ಶಂಕರ್ ನಡುವೆ ಜಗಳವಾಗಿ ಮನಸ್ತಾಪ ಉಂಟಾಗಿತ್ತು.
ಸಿದ್ದಲಿಂಗಯ್ಯ ಅವರನ್ನು ಕೊಲೆ ಮಾಡಿದರೆ ಸಾಲ ಕೊಡುವ ಪ್ರಮೇಯವೇ ಬರುವುದಿಲ್ಲ ಎಂದು ಶಂಕರ್ ತನ್ನ ಸಹಚರ ನಟರಾಜು ಜೊತೆಗೂಡಿ ಕೊಲೆಗೆ ಸಂಚು ರೂಪಿಸಿದ್ದ.
ಜೂನ್ 26ರಂದು ಹೊರಗೆ ಹೋಗಿ ಬರೋಣ ಎಂದು ಸಿದ್ದಲಿಂಗಯ್ಯ ಅವರನ್ನು ಇಬ್ಬರೂ ಚನ್ನಪಟ್ಟಣ ತಾಲ್ಲೂಕಿನ ಗೌಡಗೆರೆ ಗೇಟ್ಗೆ ವಾಹನದಲ್ಲಿ ಕರೆದುಕೊಂಡು ಬಂದಿದ್ದರು.
ರಾತ್ರಿ ಕಣ್ಣಿಗೆ ಖಾರಪುಡಿ ಎರಚಿ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದರು. ಬಳಿಕ ಶಂಕರ್ ಎಂ.ಕೆ. ದೊಡ್ಡಿ ಠಾಣೆಗೆ ಬಂದು ಶರಣಾಗಿದ್ದ. ಬಳಿಕ ನಟರಾಜುನನ್ನು ಪೊಲೀಸರು ಬಂಧಿಸಿದ್ದರು.
ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಸರ್ಕಲ್ ಇನ್ಸ್ಪೆಕ್ಟರ್ ಎ.ಪಿ. ಕುಮಾರ್ ಅವರು ತನಿಖೆ ನಡೆಸಿ, ಆರೋಪಿಗಳ ವಿರುದ್ಧ ಕೋರ್ಟ್ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಧೀಶ ಎಂ.ಎಚ್. ಅಣ್ಣಯ್ಯನವರ ಅವರು ಆರೋಪಿಗಳ ವಿರುದ್ಧದ ಆರೋಪ ಸಾಬೀತಾಗಿದ್ದರಿಂದ, ಇಬ್ಬರಿಗೂ ಜೀವಾವಧಿ ಶಿಕ್ಷೆ ಹಾಗೂ ತಲಾ ₹1.10 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿದರು.


