ಬೆಳಗಾವಿ: ಇಲ್ಲಿನ ಸರ್ಕಾರಿ ಸರ್ಕಿಟ್ ಹೌಸ್ ಆವರಣದಲ್ಲಿ ರಿಪಬ್ಲಿಕ್ ಸೇನೆ ಸಂಘಟನೆಯ ರಾಜ್ಯ ಸಮಿತಿ ಸಭೆ ಹಾಗೂ ನೂತನ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಅತ್ಯಂತ ಸಡಗರ ಮತ್ತು ದೃಢ ಸಂಕಲ್ಪದೊಂದಿಗೆ ಯಶಸ್ವಿಯಾಗಿ ನೆರವೇರಿತು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸುವ ಜನಪರ ಆಂದೋಲನವಾಗಿ ರಿಪಬ್ಲಿಕ್ ಸೇನೆ ಈ ಕಾರ್ಯಕ್ರಮದ ಮೂಲಕ ಮತ್ತಷ್ಟು ಬಲಗೊಂಡಿದೆ.
ಕಾರ್ಯಕ್ರಮದಲ್ಲಿ ಸಂಘಟನೆಯ ಜವಾಬ್ದಾರಿಯನ್ನು ಹೊತ್ತ ಪ್ರಮುಖ ನಾಯಕರಾದ ರಾಜ್ಯ ಅಧ್ಯಕ್ಷರು ಶ್ರವಣ್ ಕುರನೆ, ರಾಜ್ಯ ಉಪಾಧ್ಯಕ್ಷರು ರಾಜಕುಮಾರ್ ಮೊರೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಉತ್ತಮ ಕಾಂಬಳೆ, ರಾಜ್ಯ ಸಂಘಟನೆ ಸಂಚಾಲಕರು ರಮೇಶ್ ಹೂಗಾರ್, ರಾಜ್ಯ ಖಜಾಂಚಿ ಅಮೀನ್ ಮುಲ್ಲಾ, ರಾಜ್ಯ ಯುವ ಘಟಕ ಅಧ್ಯಕ್ಷರು ಸುಜಯ್ ಹಳ್ಳದಕೇರಿ ಹಾಗೂ ರಾಜ್ಯ ಸಮಿತಿ ಸದಸ್ಯರಾದ ಮಾದೇವ್ ಸರ್ ಕಾಂಬಳೆ, ಉಮೇಶ್ ರಾಥೋಡ್, ಲಕ್ಷ್ಮಣ್ ದೇವಪುರ್, ವೀರೇಶ್ ಮೇಟಿ ಹಾಗೂ ಹುಸೇನ್ ಬಡೆಗರ್ ಅವರು ಅಧಿಕಾರ ಸ್ವೀಕರಿಸಿದರು.
ಸಮಾಜದಲ್ಲಿ ನಡೆಯುವ ಅನ್ಯಾಯ, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ ದೀನದಲಿತರಿಗೆ ಕಾನೂನಾತ್ಮಕ ಬೆಂಬಲ ನೀಡುವುದು, ಯುವ ಜನಾಂಗದಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವುದು ಹಾಗೂ ಸರ್ಕಾರದ ಜನಪರ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನಿರಂತರ ನಿಗಾ ವಹಿಸುವುದು ಸಂಘಟನೆಯ ಮೂಲ ಉದ್ದೇಶವಾಗಿದೆ ಎಂದು ಈ ವೇಳೆ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷರಾದ ಶ್ರವಣ್ ಕುರನೆ ಅವರು ನೂತನ ಜಿಲ್ಲಾ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ, ಸಂಘಟನೆಯನ್ನು ಹಳ್ಳಿ ಹಳ್ಳಿಗಳಿಗೂ ವಿಸ್ತರಿಸುವಂತೆ ಕರೆ ನೀಡಿದರು. ಜವಾಬ್ದಾರಿ ವಹಿಸಿಕೊಂಡ ನೂತನ ಪದಾಧಿಕಾರಿಗಳು ಮಾತನಾಡಿ, ಸಾರ್ವಜನಿಕರ समस्याಗಳಿಗೆ ಸ್ಪಂದಿಸಲು ಮತ್ತು ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆ ಹಾಗೂ ನ್ಯಾಯವನ್ನು ಎತ್ತಿಹಿಡಿಯಲು ನಮ್ಮ ಇಡೀ ತಂಡವು ಹಗಲಿರುಳು ಶ್ರಮಿಸಲಿದೆ ಎಂದು ದೃಢ ಸಂಕಲ್ಪ ಮಾಡಿದರು. ಸಭೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪ್ರಮುಖ ಮುಖಂಡರು, ನೂರಾರು ಕಾರ್ಯಕರ್ತರು ಹಾಗೂ ಗಣ್ಯರು ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. 
ವರದಿ :ಮಹಾಂತೇಶ್ ಎಸ್ ಹುಲಿಕಟ್ಟಿ


