ತುರುವೇಕೆರೆ : ಪ್ರತಿಯೊಬ್ಬ ವ್ಯಕ್ತಿಯ ಯಶಸ್ಸಿನ ಹಿಂದೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಒಂದು ಶಕ್ತಿ ಮಾರ್ಗದರ್ಶನ ಮಾಡಿರುತ್ತದೆ. ಆ ಶಕ್ತಿಯೇ ಗುರು ಎಂದು ಗ್ಲೋಬಲ್ ಎಂಬಸ್ಸಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗಂಗಾಧರ ದೇವರಮನೆ ತಿಳಿಸಿದರು.
ಪಟ್ಟಣದ ಗ್ಲೋಬಲ್ ಎಂಬಸ್ಸಿ ಪ್ರೀಪ್ರೈಮರಿ ಶಾಲೆಯಲ್ಲಿ ಆಯೋಜಿಸಿದ್ದ ಗುರು ಪೌರ್ಣಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುರು ಎಂದರೆ ದಿಕ್ಸೂಚಿ, ಮಾರ್ಗದರ್ಶಕ. ಸಾಧನೆಯ ಹಾದಿಯಲ್ಲಿ ಪ್ರತಿಯೊಬ್ಬರ ಹಿಂದೆ ಗುರು ಇರಬೇಕು, ಮುಂದೆ ಗುರಿ ಇರಬೇಕು. ಗುರು, ಗುರಿ ಇದ್ದು ಸಾಧಿಸುವ ಛಲವಿದ್ದಾಗ ಮಾತ್ರ ಯಶಸ್ಸಿನ ಶಿಖರವನ್ನೇರಲು ಸಾಧ್ಯ ಎಂದರು.
ಗುರು ಪೌರ್ಣಮಿಯು ಪವಿತ್ರ ದಿನವಾಗಿದ್ದು, ಮಹರ್ಷಿ ವೇದವ್ಯಾಸರನ್ನು ನೆನಪಿಸಿಕೊಳ್ಳುವ ದಿನವಾಗಿದೆ. ವೇದವ್ಯಾಸರು ಬಹಳ ಶ್ರೇಷ್ಠ ಗುರುಗಳಾಗಿದ್ದು, ಅವರ ಆಧ್ಯಾತ್ಮಿಕ ಚಿಂತನೆ, ದೂರದೃಷ್ಟಿ, ಜ್ಞಾನ, ಸಂಯಮಗಳು ಹಾಗೂ ವೇದವ್ಯಾಸರು ರಚಿಸಿದ ಮಹಾಭಾರತದ ೧೮ ಪುರಾಣಗಳಲ್ಲಿನ ತತ್ವ, ಆದರ್ಶಗಳು ಇಂದಿಗೂ ಆದರ್ಶನೀಯವಾಗಿದೆ ಎಂದರು.
ಗುರು ಪರಂಪರೆ ಎಂಬುದು ಬಹಳ ದೊಡ್ಡದು. ಇಂದು ನಾವು ಆದರ್ಶನೀಯ ವ್ಯಕ್ತಿಗಳೆಂದು ಗುರುತಿಸುವ ಮಹಾತ್ಮ ಗಾಂಧೀಜಿಯವರು ಗೋಪಾಲಕೃಷ್ಣ ಗೋಖಲೆಯವರನ್ನು, ಸ್ವಾಮಿ ವಿವೇಕಾನಂದರು ರಾಮಕೃಷ್ಣ ಪರಮಹಂಸರನ್ನು, ಏಕಲವ್ಯರು ದ್ರೋಣಾಚಾರ್ಯರನ್ನು ಗುರುಗಳಾಗಿ ಸ್ವೀಕರಿಸಿ ಪೂಜಿಸಿ ಯಶಸ್ಸು ಪಡೆದವರಾಗಿದ್ದಾರೆ. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿಗಾಗಿ ಶಿಕ್ಷಕರ ಅಂದರೆ ಗುರುಗಳ ದಿನಾಚರಣೆಯನ್ನು ಆಚರಿಸಲಾಗುತ್ತಿರುವುದು ಗುರುಗಳ ಮಹತ್ವ ಎಷ್ಟೆಂಬುದನ್ನು ಜಗತ್ತಿಗೆ ಸಾರಿದೆ ಎಂದರು. 
ಶಾಲೆಯ ಪ್ರೀಪ್ರೈಮರಿ ಮಕ್ಕಳು ಮಹರ್ಷಿ ವೇದವ್ಯಾಸರು ಹಾಗೂ ಶಿಷ್ಯವೃಂದದ ವೇಷಭೂಷಣಗಳನ್ನು ತೊಟ್ಟು ಪೌರಾಣಿಕ ಕಾಲದ ಗುರು ಶಿಷ್ಯರ ಪರಂಪರೆ, ಗುರುಕುಲದ ಪಾಠಪ್ರವಚನ ನಡೆಸುವ ರೀತಿಯನ್ನು ಪ್ರದರ್ಶಿಸಿದ್ದು ನೋಡುಗರ ಕಣ್ಮನ ಸೆಳೆಯಿತು. ಸಂಸ್ಥೆಯ ಕಾರ್ಯದರ್ಶಿ ಶರಿತಾ ದೇವರಮನೆ, ಶಿಕ್ಷಕರಾದ ರಾಣಿ, ಹೇಮಾ, ಸುನಿತಾ, ಮಹಾಲಕ್ಷ್ಮಿ, ಮಂಜುಳಾ, ಪ್ರಿಯಾ, ಸೌಮ್ಯ ಹಾಗೂ ಪೋಷಕರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್


