ಬೆಳಗಾವಿ : ಜಿಲ್ಲೆಯ (Belagavi) ರಾಯಬಾಗ ತಾಲೂಕಿನಲ್ಲಿ ನಾಗರಪಂಚಮಿ ಹಬ್ಬದ ಆಚರಣೆಯ ನಡುವೆಯೇ ಕರುಣಾಜನಕ ಘಟನೆಯೊಂದು ಸಂಭವಿಸಿದೆ.
ಕೃಷಿ ಭೂಮಿಯಲ್ಲಿ ಕಳೆ (Weed) ತೆಗೆಯುವಲ್ಲಿ ತೊಡಗಿದ್ದ 43 ವರ್ಷದ ಸತ್ಯವ್ವ ಶಿಂಗೆ ಎಂಬ ಮಹಿಳೆ ಮೇಲೆ ಪೊದೆಯಲ್ಲಿ ಅಡಗಿದ್ದ ಕೊಳಕುಮಂಡಲ ಎಂಬ ತೀವ್ರ ವಿಷಕಾರಿ ಸರ್ಪ ದಿಢೀರನೆ ದಾಳಿ (Snake bite) ಮಾಡಿದೆ.
ಹೀಗೆ ಹಾವಿನ ದಾಳಿಯ ನಂತರ ಸರ್ಪದ ತೀವ್ರ ವಿಷ ದೇಹವನ್ನು ಆವರಿಸಿದ ಪರಿಣಾಮ ಮಹಿಳೆ ತೀವ್ರ ಅಸ್ವಸ್ಥಗೊಂಡಿದ್ದಾರೆ.
ಈ ಘಟನೆ ನಡೆದ ತಕ್ಷಣವೇ ಅವರನ್ನು ಚಿಕಿತ್ಸೆಗೆಂದು ಸಮೀಪದ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಲಾಯಿತಾದರೂ, ವೈದ್ಯಕೀಯ ನೆರವು ಸಿಗುವ ಮೊದಲೇ ಅವರು ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ.
ನಾಗರಪಂಚಮಿ ಹಬ್ಬದ ಹರ್ಷದಲ್ಲಿದ್ದ ಇಡೀ ಗ್ರಾಮ ಈ ಆಕಸ್ಮಿಕ ಅವಘಡದಿಂದಾಗಿ ತೀವ್ರ ಆಘಾತಕ್ಕೆ ಒಳಗಾಗಿದ್ದು, ಶೋಕ ಸಾಗರದಲ್ಲಿ ಮುಳುಗಿದೆ. ಈ ದುರಂತ ಘಟನೆಗೆ ಸಂಬಂಧಿಸಿದಂತೆ ರಾಯಬಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


