ಹರಿಯಾಣ: ಮರಾಠಾ ಸಾಮ್ರಾಜ್ಯ ಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜ್ ಹಾಗೂ ಸಾಹಸಿ ಮಹಿಳೆ ರಾಣಿ ಪದ್ಮಿನಿ ಅವರ ಭಾವಚಿತ್ರಗಳನ್ನು ಶೌಚಾಲಯದ ಬಾಗಿಲುಗಳಿಗೆ ಅಳವಡಿಸಿ ಅವಮಾನಿಸಿರುವ ಘಟನೆ ನಡೆದಿದೆ.
ಹರಿಯಾಣದ ಸಿಕ್ರಿಯಲ್ಲಿರುವ ‘ಮಿಲನ್ ಬ್ಯಾಂಕ್ವೆಟ್ ಹಾಲ್’ನಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಹಾಗೂ ರಾನಿ ಪದ್ಮಿನಿ ಭಾವಚಿತ್ರಗಳನ್ನು ಶೌಚಾಲಯದ ಬಾಗಿಲಿಗೆ ಹಾಕಲಾಗಿದ್ದು, ಹಿಂದೂ ಸಂಘಟನೆಗಳು ಮತ್ತು ಇತಿಹಾಸಕಾರರ ಕೆಂಗಣ್ಣಿಗೆ ಗುರಿಯಾಗಿದೆ.
ಮದುವೆ ಸಮಾರಂಭ ನಡೆಯುವ ಬ್ಯಾಂಕ್ವೆಟ್ ಹಾಲ್ನಲ್ಲಿ ಶೌಚಾಲಯದ ಬಾಗಿಲುಗಳ ಮೇಲೆ ಪುರುಷ ಮತ್ತು ಮಹಿಳಾ ವಿಭಾಗವನ್ನು ಗುರುತಿಸಲು ಶಿವಾಜಿ ಮಹಾರಾಜ್ ಮತ್ತು ಮಹಾರಾಣಿ ಪದ್ಮಿನಿ ಅವರ ಭಾವಚಿತ್ರಗಳನ್ನು ಬಳಸಲಾಗಿದೆ. ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ, ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಇದು ಭಾರತೀಯ ಇತಿಹಾಸ ಮತ್ತು ಹಿಂದುತ್ವದ ಆಸ್ಮಿತೆಗೆ ಮಾಡಿದ ಅವಮಾನ ಹಾಗೂ ಅಪಚಾರ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಮ್ಮ ಇತಿಹಾಸದ ವೀರ ಪುರುಷರು ಮತ್ತು ಮಹಿಳೆಯರು ನಮಗೆ ಪೂಜನೀಯರು. ಅವರನ್ನು ಶೌಚಾಲಯದ ಬಾಗಿಲಿಗೆ ಬಳಸುವುದು ಅಕ್ಷಮ್ಯ ಅಪರಾಧ,” ಎಂದು ನೆಟ್ಟಿಗರು ಟೀಕಿಸಿದ್ದಾರೆ. ತಕ್ಷಣ ಈ ಬಗ್ಗೆ ಕ್ರಮ ಕೈಗೊಂಡು ಅವುಗಳನ್ನು ತೆಗೆಯುವಂತೆ ಒತ್ತಾಯಿಸಿದ್ದಾರೆ.




