ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪಂಚಮಸಾಲಿ ಪೀಠದ ಸ್ವಾಮೀಜಿಗಳು ಮತ್ತು ಟ್ರಸ್ಟ್ಗಳ ವಿರುದ್ಧ ಮತ್ತೊಮ್ಮೆ ಗುಡುಗಿದ್ದಾರೆ.
ವಚನಾನಂದ ಸ್ವಾಮೀಜಿಗಳೇನು ಸತ್ಯಹರಿಶ್ಚಂದ್ರರಲ್ಲ, ಎರಡೂ ಪೀಠದ ಟ್ರಸ್ಟ್ಗಳು ಸಮಾಜದ ನಂಬಿಕೆ ಕಳೆದುಕೊಂಡಿದ್ದು, ಅವುಗಳನ್ನು ಕೆಲವರು ಖಾಸಗಿ ಆಸ್ತಿ ಮಾಡಿಕೊಂಡಿದ್ದಾರೆ ಎಂದು ನೇರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಕೂಡಲಸಂಗಮ ಮತ್ತು ಹರಿಹರ ಪಂಚಮಸಾಲಿ ಪೀಠಗಳೆರಡರಲ್ಲೂ ಸಮಾಜಕ್ಕೆ ನ್ಯಾಯ ಸಿಗುತ್ತಿಲ್ಲ. ಟ್ರಸ್ಟ್ಗಳಲ್ಲಿ ಪ್ರಾಮಾಣಿಕವಾಗಿ ಸಮಾಜಕ್ಕಾಗಿ ಕೆಲಸ ಮಾಡುವವರು ಯಾರೂ ಇಲ್ಲ. ಬದಲಾಗಿ, ಈ ಟ್ರಸ್ಟ್ಗಳು ಸರ್ಕಾರವನ್ನು ಬ್ಲ್ಯಾಕ್ಮೇಲ್ ಮಾಡಲು ಬಳಕೆಯಾಗುತ್ತಿವೆ. ನಮ್ಮ ಸಮುದಾಯದ ಒಂದು ಕೋಟಿ ಮತಗಳಿವೆ ಎಂದು ಹೇಳಿ ರಾಜಕಾರಣಿಗಳನ್ನು ಬೆದರಿಸುವ ತಂತ್ರ ಇಲ್ಲಿ ನಡೆಯುತ್ತಿದೆ ಎಂದು ಕಿಡಿಕಾರಿದರು.
ಹಿಂದಿನ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರವಿದ್ದಾಗ ಈ ಟ್ರಸ್ಟ್ಗಳಿಗೆ 11 ಕೋಟಿ ರೂಪಾಯಿ ಅನುದಾನ ನೀಡಲಾಗಿತ್ತು. ಆ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಪಿಡಿಓ ಅವರ ಸಹಿಯನ್ನೇ ನಕಲಿ ಮಾಡಲಾಗಿತ್ತು. ಹೀಗಿದ್ದಾಗ ಈ ಟ್ರಸ್ಟ್ಗಳನ್ನು ಜನ ಹೇಗೆ ನಂಬಬೇಕು?” ಎಂದು ಪ್ರಶ್ನಿಸಿದರು.
ಈ ವಿಚಾರವನ್ನು ವಿಧಾನಸಭೆಯಲ್ಲಿ ಚರ್ಚಿಸಲು ತಾನು ಮುಂದಾಗಿದ್ದರೂ, ಸ್ಪೀಕರ್ ಮೇಲೆ ಒತ್ತಡ ತಂದು ಚರ್ಚೆಗೆ ಬಾರದಂತೆ ತಡೆಯಲಾಯಿತು ಎಂದು ತಮ್ಮದೇ ಸರ್ಕಾರದ ಅವಧಿಯ ಬೆಳವಣಿಗೆಯನ್ನು ನೆನಪಿಸಿಕೊಂಡರು.
ಇತ್ತೀಚೆಗೆ ಜಯಮೃತ್ಯುಂಜಯ ಶ್ರೀಗಳ ವಿರುದ್ಧ ಕೇಳಿಬಂದಿರುವ ಆಪಾದನೆಗಳ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ನಾನು ಸಂತ್ರಸ್ತೆಯ ವಿಡಿಯೋ ನೋಡಿದ್ದೇನೆ. ಈ ಬಗ್ಗೆ ಈಗಾಗಲೇ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ದೂರಿನಲ್ಲಿರುವ ಸಹಿ ಅಸಲಿಯೋ ಅಥವಾ ನಕಲಿಯೋ ಎಂಬುದು ತನಿಖೆಯಿಂದಲೇ ಹೊರಬರಲಿ. ನಾನು ಯಾರ ಪರವಾಗಿಯೂ ಮಾತನಾಡುವುದಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ. ಅಲ್ಲದೆ, ಸ್ವಾಮೀಜಿಗಳು ತಮ್ಮ ಮೇಲಿರುವ ಸಂಶಯದ ಮಸಿ ಹೋಗಲಾಡಿಸಿ ಸಮಾಜಕ್ಕೆ ಸ್ಪಷ್ಟನೆ ನೀಡಬೇಕು ಎಂದು ಯತ್ನಾಳ್ ತಿಳಿಸಿದರು.




