ತುರುವೇಕೆರೆ : ತಾಲ್ಲೂಕಿನ ಬಾಣಸಂದ್ರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನೂತನ ಸದಸ್ಯರಿಗೆ ಸಾಲ ವಿತರಣೆ ಮಾಡಲಾಯಿತು. ತುಮಕೂರು ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದಲಿಂಗಪ್ಪ, ಬ್ಯಾಂಕಿನ ಅಧ್ಯಕ್ಷ ಸಂತೋಷ್ ಕಂಟ್ಲಿ ಬ್ಯಾಂಕಿನ 134 ಸದಸ್ಯರಿಗೆ ಸುಮಾರು 30 ಲಕ್ಷ ರೂಗಳ ಸಾಲವನ್ನು ವಿತರಣೆ ಮಾಡಿದರು.

ಸದಸ್ಯರನ್ನುದ್ದೇಶಿಸಿ ಮಾತನಾಡಿದ ತುಮಕೂರು ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದಲಿಂಗಪ್ಪ, ಹೊಸ ಸದಸ್ಯರಿಗೆ ಸಾಲ ನೀಡಲಾಗುತ್ತಿದೆ. ಸಕಾಲದಲ್ಲಿ ಸಂಘಕ್ಕೆ ಸಾಲ ಮರುಪಾವತಿ ಮಾಡಿದರೆ ಸರ್ಕಾರವೇ ರೈತರ ಸಾಲಕ್ಕೆ ಬಡ್ಡಿ ನೀಡಲಿದೆ. ಸರಿಯಾದ ಸಮಯದಲ್ಲಿ ಸಾಲ ಮರುಪಾವತಿ ಮಾಡದಿದ್ದಲ್ಲಿ ಸಾಲದ ಮೇಲಿನ ಬಡ್ಡಿಯನ್ನು ರೈತರೇ ಪಾವತಿಸಬೇಕಾಗುತ್ತದೆ. ಆದ್ದರಿಂದ ರೈತರು ಪಡೆದ ಸಾಲವನ್ನು ಸದುಪಯೋಗ ಪಡಿಸಿಕೊಂಡು ಅಭಿವೃದ್ದಿ ಹೊಂದುವುದರ ಜೊತೆಗೆ ಸಂಘ ನೀಡಿದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಬೇಕೆಂದರು.
ಸಂಘದ ಅಧ್ಯಕ್ಷ ಸಂತೋಷ್ ಕಂಟ್ಲಿ ಮಾತನಾಡಿ, ರೈತರು ಮತ್ತು ಸಂಘ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಂಘದ ಶ್ರೇಯೋಭಿವೃದ್ದಿಗೆ ರೈತರ ಸಹಕಾರ ಅಗತ್ಯ ಹಾಗೆಯೇ ರೈತರ ಪ್ರಗತಿಗೆ ಅಗತ್ಯ ಸಾಲ ಸೌಲಭ್ಯ, ಸೌಕರ್ಯ ಒದಗಿಸುವುದು ಸಂಘದ ಧ್ಯೇಯವಾಗಿದೆ. ಸಂಘದಲ್ಲಿ ಸಾಲ ಪಡೆಯುವಾಗ ಇರುವ ಆಸಕ್ತಿ ಸಾಲ ಮರುಪಾವತಿ ಮಾಡುವಾಗಲೂ ಉಳಿಸಿಕೊಂಡರೆ ರೈತರಿಗೂ ಅನುಕೂಲ ಹಾಗೂ ಸಂಘದ ಪ್ರಗತಿಯೂ ಸಾಧ್ಯವಾಗುತ್ತದೆ ಎಂದರು.
ಸಂಘದಿಂದ ಸಾಲ ಪಡೆದ ರೈತರು ಸರ್ಕಾರ ಸಾಲ ಮನ್ನಾ ಮಾಡುತ್ತದೆ ಎಂದು ಸಾಲ ಮರುಪಾವತಿಯ ಬಗ್ಗೆ ತಾತ್ಸಾರ ಮನೋಭಾವ ತಾಳಬಾರದು. ಇದರಿಂದ ರೈತರಿಗೆ ಹೆಚ್ಚು ಅನಾನುಕೂಲವಾಗುತ್ತದೆ. ಸರ್ಕಾರ ಸಾಲ ಮನ್ನಾ ಮಾಡದಿದ್ದರೆ ಪಡೆದ ಸಾಲದ ಬಡ್ಡಿ ಹೆಚ್ಚಾಗಿ ರೈತರಿಗೆ ಹೊರೆಯಾಗುತ್ತದೆ. ಅಲ್ಲದೆ ಮತ್ತೊಮ್ಮೆ ಸಂಘದಿಂದ ಸಾಲ ಪಡೆಯುವುದು ಕಷ್ಟಕರವಾಗಲಿದೆ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು. ಸಕಾಲದಲ್ಲಿ ಸಾಲ ಮರುಪಾವತಿ ಮಾಡುವುದರಿಂದ ಮತ್ತೊಬ್ಬರಿಗೆ ಸಾಲ ಪಡೆಯಲು ಅನುಕೂಲವಾಗುತ್ತದೆ. ಸಂಘ ಹಾಗೂ ರೈತರ ಸಂಬಂಧ ಮತ್ತಷ್ಟು ವೃದ್ದಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಸಾವಿತ್ರಮ್ಮ, ನಿರ್ದೇಶಕರಾದ ದೊರೈರಾಜು, ನಿಜಗುಣ, ಭೈರಪ್ಫಾಜಿ, ಶಿವಲಿಂಗಯ್ಯ, ನಾಗರಾಜು, ಶಿವರಾಮಯ್ಯ, ಪ್ರಕಾಶ್, ರವಿಕುಮಾರ್ ಹಾಗೂ ಸಂಘದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್,


