ಧಾರವಾಡ: ಪ್ರೀತಿ, ವಿಶ್ವಾಸದಿಂದ ಬಾಳಬೇಕಾದ ಪತಿಯೇ ರಕ್ಕಸನಾಗಿ ಬದಲಾದ ಘೋರ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.
ಹೆಂಡತಿ ದಪ್ಪಗಿದ್ದಾಳೆ ಎಂಬ ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನೇ ಪತಿ ಕತ್ತು ಹಿಸುಕಿ ಕೊಲೆ ಮಾಡಿರುವ ಭೀಕರ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಣಸಿ ಗ್ರಾಮದಲ್ಲಿ ಈ ಅಮಾನವೀಯ ಕೃತ್ಯ ನಡೆದಿದೆ. ಪ್ರಿಯಾಂಕಾ ಕಮಲಾಕರ್ (29) ಕೊಲೆಯಾದ ದುರ್ದೈವಿ ಮಹಿಳೆ. ಪತ್ನಿಯನ್ನೇ ಯಮನ ಲೋಕಕ್ಕೆ ಕಳುಹಿಸಿದ ಪಾಪಿ ಪತಿಯನ್ನು ಬಸವರಾಜ್ ವಡ್ಡಾರ್. ಆರೋಪಿ ಬಸವರಾಜ್ ವಡ್ಡಾರ್ ತನ್ನ ಪತ್ನಿ ಪ್ರಿಯಾಂಕಾ ದಪ್ಪಗಿದ್ದಾಳೆ ಎಂಬ ಕಾರಣಕ್ಕೆ ದಿನನಿತ್ಯ ಜಗಳ ತೆಗೆಯುತ್ತಿದ್ದ ಎನ್ನಲಾಗಿದೆ.
ಘಟನೆ ನಡೆದ ದಿನ ಕೇವಲ ತಾನೊಬ್ಬನೇ ಅಲ್ಲದೆ, ಇನ್ನೂ ಮೂವರ ಜೊತೆ ಸೇರಿಕೊಂಡು ಕ್ರೂರವಾಗಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಮಾಹಿತಿಯ ಪ್ರಕಾರ, ಬಸವರಾಜ್ ಹಾಗೂ ಪ್ರಿಯಾಂಕಾ ಅವರ ವಿವಾಹವು 2014ರಲ್ಲಿ ನಡೆದಿತ್ತು.
ಮದುವೆಯಾದ ಆರಂಭದಲ್ಲಿ ಚೆನ್ನಾಗಿಯೇ ಇದ್ದ ಬಸವರಾಜ್, ಇತ್ತೀಚಿನ ದಿನಗಳಲ್ಲಿ ಪತ್ನಿಯ ದಪ್ಪಗಿರುವ ಶರೀರವನ್ನು ಚುಚ್ಚಿ ಚುಚ್ಚಿ ಮಾತನಾಡುತ್ತಿದ್ದ. ಅಷ್ಟೇ ಅಲ್ಲದೆ, ತವರು ಮನೆಯಿಂದ ಹೆಚ್ಚುವರಿ ಚಿನ್ನ ಹಾಗೂ ಹಣವನ್ನು ತರುವಂತೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ನವಲಗುಂದ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಬಸವರಾಜ್ ಹಾಗೂ ಆತನಿಗೆ ಸಹಕರಿಸಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.


