ಶಿವಮೊಗ್ಗ: ಮದುವೆಯಾದ ಎರಡೇ ತಿಂಗಳಿಗೆ ನವವಿವಾಹಿತೆಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹಣಜಿ ಗ್ರಾಮದಲ್ಲಿ ನಡೆದಿದೆ.
ಸ್ವಾತಿ (24) ಆತ್ಮಹತ್ಯೆಗೆ ಶರಣಾದ ಮಹಿಳೆ. ಎರಡು ತಿಂಗಳ ಹಿಂದಷ್ಟೇ ಸ್ವಾಅತಿ ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿ ಗ್ರಾಮದ ಸ್ವರೂಪ್ನನ್ನು ಮದುವೆಯಾಗಿದ್ದರು.
ಗರ್ಭಿಣಿಯಾಗಿದ್ದ ಆಕೆಗೆ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಂಡಿತ್ತು. 20 ದಿನಗಳ ಹಿಂದೆ ಹಣಜಿ ಗ್ರಾಮದ ತವರು ಮನೆಗೆ ಸ್ವಾತಿ ತೆರಳಿದ್ದರು.
ತಂದೆ ತಾಯಿ ಜಮೀನು ಕೆಲಸಕ್ಕೆ ಹೋದಾಗ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಇದನ್ನು ಗಮನಿಸಿದ ಅಕ್ಕಪಕ್ಕದವರು ಹೊಲದಲ್ಲಿದ್ದ ತಂದೆ ತಾಯಿಗೆ ವಿಷಯ ತಿಳಿಸಿ, ಮನೆಯ ಬಾಗಿಲು ಮುರಿಯಲು ಮುಂದಾಗಿದ್ದಾರೆ. ಬಾಗಿಲು ಮುರಿದು ಸ್ವಾತಿಯನ್ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕುಟುಂಬದವರ ಮಾಹಿತಿಯಂತೆ ಆರೋಗ್ಯ ಸಮಸ್ಯೆಯಿಂದ ತುಂಬಾ ವಾಂತಿಯಾಗುತ್ತಿತ್ತು. ಸರಿಯಾಗಿ ಊಟ, ತಿಂಡಿ ಮಾಡುತ್ತಿರಲಿಲ್ಲ ಎನ್ನಲಾಗಿದೆ. ಸದ್ಯ ಇದೇ ಕಾರಣಕ್ಕೆ ಆಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.


