ತುರುವೇಕೆರೆ : ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪ, ಸಂಕಲ್ಪ ಸೇವಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕೃತಜ್ಞತಾ ದಿನದ ಸಮಾರಂಭದಲ್ಲಿ ಮಾಜಿ ಪುರಸಭಾ ಅಧ್ಯಕ್ಷ ಹೆಚ್.ನಂಜಪ್ಪನವರ ಸ್ಮರಣಾರ್ಥ ಪಟ್ಟಣದ ವಾಣಿಜ್ಯ ಸಂಕೀರ್ಣದ ಮೇಲ್ಭಾಗದಲ್ಲಿ “ಐ ಲವ್ ತುರುವೇಕೆರೆ” ನಾಮಫಲಕವನ್ನು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ ಅನಾವರಣಗೊಳಿಸಿದರು.
ನಂತರ ಮಾತನಾಡಿದ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ, ರಾಜ್ಯದ ಮಹಿಳಾ ಸೇವಾ ಸಂಸ್ಥೆಗಳ ಪೈಕಿ ಇನ್ನರ್ ವೀಲ್ ಕ್ಲಬ್ ಅತಿ ಹೆಚ್ಚು ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸುತ್ತಿರುವ ಸಂಸ್ಥೆಯಾಗಿದೆ. ಪುರುಷ ಪ್ರಧಾನ ಸಮಾಜದಲ್ಲಿ ಅಶಕ್ತರು, ಅಸಹಾಯಕರಿಗೆ ನಿಸ್ವಾರ್ಥ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಇನ್ನರ್ ವೀಲ್ ಮಹಿಳೆಯರು ಮುಂಚೂಣಿಯಲ್ಲಿ ನಿಂತು ನೆರವಾಗುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದರು. 
ಇನ್ನರ್ ವೀಲ್ ಸಂಸ್ಥೆ ಕೇವಲ ಮಹಿಳೆಯರನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸದೆ ಶಾಲಾ ಕಾಲೇಜುಗಳಿಗೆ, ವಿದ್ಯಾರ್ಥಿಗಳಿಗೆ ಅಗತ್ಯ ಪಾಠೋಪಕರಣ, ಪೀಠೋಪಕರಣ ಒದಗಿಸುತ್ತಿದೆ. ಮಹಿಳೆಯರಿಗೆ ಸ್ವಾವಲಂಬಿ ಬದುಕಿಗೆ ಅಗತ್ಯ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮ, ಪರಿಸರ ಸಂರಕ್ಷಣೆ, ಬಸ್ ನಿಲ್ದಾಣದಲ್ಲಿ ತಂಗುದಾಣ ನಿರ್ಮಾಣದಂತಹ ಶಾಶ್ವತ ಕಾರ್ಯಕ್ರಮಗಳನ್ನು ನಡೆಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಇನ್ನರ್ ವೀಲ್ ಸಂಸ್ಥೆ ಕೈಗೊಳ್ಳುವ ದೊಡ್ಡ ಮಟ್ಟದ ಸೇವಾ ಕಾರ್ಯದಲ್ಲಿ ಹಾಲಪ್ಪ ಪ್ರತಿಷ್ಠಾನ ಕೈಜೋಡಿಸಲಿದೆ ಎಂದು ಭರವಸೆ ನೀಡಿದರು.
ತಹಸೀಲ್ದಾರ್ ಕುಂಇ ಅಹಮದ್ ಮಾತನಾಡಿ, ಕೌಟುಂಬಿಕ ಜವಾಬ್ದಾರಿಗಳ ನಡುವೆ ತಾಯಂದಿರು ಇನ್ನರ್ ವೀಲ್ ಸಂಸ್ಥೆಯ ಸದಸ್ಯರಾಗಿ ಸಾಮಾಜಿಕ ಬದ್ಧತೆಯೊಂದಿಗೆ ನಿಸ್ವಾರ್ಥ ಮನೋಭಾವದಿಂದ ಸಾಮಾಜಿಕ ಸೇವೆಯಲ್ಲಿ ನಿರತರಾಗಿರುವುದು ಸಂತೋಷದ ಸಂಗತಿಯಾಗಿದೆ. ಪ್ರಮುಖವಾಗಿ ತಾಯಂದಿರು ತುರುವೇಕೆರೆ ಪಟ್ಟಣದಲ್ಲಿ ಎರಡು ಹಾಗೂ ದಂಡಿನಶಿವರದಲ್ಲಿ ಒಂದು ತಂಗುದಾಣ ನಿರ್ಮಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿರುವುದು ತಾಯಂದಿರ ನೆರಳು ನೀಡುವ ಗುಣಕ್ಕೆ ಸಾಕ್ಷಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪದ ಅಧ್ಯಕ್ಷೆ ಇಂದಿರಾ ಪ್ರಭಾಕರ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥಾಪಕ ಅಧ್ಯಕ್ಷೆ ಗೀತಾಸುರೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇದೇ ಸಂದರ್ಭದಲ್ಲಿ ಸುಂಕಲಾಪುರ ಸರ್ಕಾರಿ ಶಾಲೆಗೆ ನಲಿಕಲಿ ಟೇಬಲ್, ಬಾಲಕಿಯರ ಸರ್ಕಾರಿ ಪಪೂ ಕಾಲೇಜಿಗೆ ಕಂಪ್ಯೂಟರ್ ಟೇಬಲ್ ಅನ್ನು ಡಾ.ಶುಭ, ಮಾದಿಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ, ಪೆನ್ನನ್ನು ಭಾಗ್ಯ ಸಿದ್ದೇಶ್, ಅಂಚಿಹಳ್ಳಿ ಸರ್ಕಾರಿ ಶಾಲೆಯ ಮಕ್ಕಳಿಗೆ ಶಾಲಾ ಬ್ಯಾಗನ್ನು ಮಾನಸರಘು, ಹುಲಿಕಲ್ ಶಾಲಾ ವಿದ್ಯಾರ್ಥಿಗಳಿಗೆ ಟ್ರಾಕ್ ಸೂಟ್ ಅನ್ನು ಪ್ರಭಾಕರ್, ಕಲ್ಕೆರೆ ಶಾಲಾ ಮಕ್ಕಳಿಗೆ ಕ್ರೀಡಾ ಸಾಮಗ್ರಿಯನ್ನು ಲೀಲಾನಾಗರಾಜ್ ಕೊಡುಗೆಯಾಗಿ ನೀಡಿದರು. ಪಪಂ ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಗ್ಯಾರಂಟಿ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್, ಪಪಂ ಮಾಜಿ ಅಧ್ಯಕ್ಷ ಶಶಿಶೇಖರ್, ಸಂಕಲ್ಪ ಸೇವಾ ಟ್ರಸ್ಟ್ ಅಧ್ಯಕ್ಷೆ ಡಾ.ಆಶಾ ಚೌದ್ರಿ, ಇನ್ನರ್ ವೀಲ್ ಕಾರ್ಯದರ್ಶಿ ಮಮತಾ ಅಶೋಕ್, ಟ್ರಸ್ಟ್ ಕಾರ್ಯದರ್ಶಿ ಲತಾಪ್ರಸನ್ನ, ಖಜಾಂಚಿ ಸವಿತಾ ಅನಿಲ್ ಸೇರಿದಂತೆ ಕ್ಲಬ್ ನ ಸದಸ್ಯರು, ನಾಗರೀಕರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್


