ಬೆಳಗಾವಿ: ಹುಟ್ಟುತ್ತಾ ಅಣ್ಣ-ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎಂಬ ಮಾತಿದೆ. ಜಮೀನು ವಿಚಾರವಾಗಿ ಅಣ್ಣ-ತಮ್ಮನ ನಡುವೆ ಆರಂಭವಾದ ಜಗಳ ತಮ್ಮನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ಸಂಭವಿಸಿದೆ.
ಜಮೀನು ಮಾರಾಟ ಮಾಡುವ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿ, ಅಣ್ಣನೇ ತನ್ನ ತಮ್ಮನನ್ನು ಕಲ್ಲಿನಿಂದ ಜಜ್ಜಿ, ಕುತ್ತಿಗೆ ಹಿಸುಕಿ ಭೀಕರವಾಗಿ ಕೊಲೆ ಮಾಡಿದ್ದಾನೆ.
ಈ ಬಗ್ಗೆ ಬೆಳಗಾವಿ ಎಸ್ ಪಿ ಕೆ ರಾಮರಾಜನ್ ಮಹಿತಿ ನೀಡಿದ್ದಾರೆ. ಮೃತನನ್ನು ರಾಜು ಸಿದ್ದಪ್ಪ ರುದ್ರಪ್ಪಗೋಳ (45) ಎಂದು ಗುರುತಿಸಲಾಗಿದ್ದು, ಆತನ ಅಣ್ಣ ಸಂಜು ರುದ್ರಪ್ಪಗೋಳ (49) ಕೊಲೆ ಮಾಡಿದ ಆರೋಪಿಯಾಗಿದ್ದಾನೆ.
ಘೋಡಗೇರಿ ಗ್ರಾಮದಲ್ಲಿರುವ ಮೂರು ಎಕರೆ ಜಮೀನು ಮಾರಾಟ ಮಾಡುವ ವಿಷಯದಲ್ಲಿ ಇಬ್ಬರ ನಡುವೆ ಗಲಾಟೆಯಾಗಿ ಮಾತಿನ ಚಕಮಕಿ ನಡೆದಿತ್ತು ಗಲಾಟೆ ವಿಕೋಪಕ್ಕೆ ತಿರುಗಿದ್ದು, ಸಂಜು ತಮ್ಮ ರಾಜುನನ್ನು ಕೊಲೆಗೈದಿದ್ದಾನೆ ಎಂದು ವಿವರಿಸಿದರು.
ಕೊಲೆಯಾದ ರಾಜು ಹಾಗೂ ಆರೋಪಿ ಸಂಜು ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದ ಪಾಳುಬಿದ್ದ ಕಟ್ಟಡವೊಂದರಲ್ಲಿ ವಾಸವಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಇವರಿಬ್ಬರು, ಪ್ರತಿದಿನ ರಾತ್ರಿ ಅಂಕಲಗಿ ಮಠದಲ್ಲಿ ಊಟ ಮುಗಿಸಿ ಅದೇ ಹಳೇ ಕಟ್ಟಡದಲ್ಲಿ ರಾತ್ರಿ ಕಳೆಯುತ್ತಿದ್ದರು.
ಘಟನೆಗೆ ಸಂಬಂಧಿಸಿದಂತೆ ಆರಂಭದಲ್ಲಿ ಎರಡೂ ಕುಟುಂಬಗಳಿಂದ ಯಾವುದೇ ದೂರು ದಾಖಲಾಗಿರಲಿಲ್ಲ. ಸದ್ಯ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.


