ಅಥಣಿ: ಹೆಂಡತಿಯ ಮೇಲಿನ ಅತಿಯಾದ ಸಂಶಯ ಮತ್ತು ಕೌಟುಂಬಿಕ ಕಲಹ ಕೊಲೆಯಲ್ಲಿ(Murder) ಅಂತ್ಯವಾಗಿರುವ ಭೀಕರ ಘಟನೆಯೊಂದು ಅಥಣಿ(Athani) ತಾಲೂಕಿನ ಕಟಗೇರಿ(Katageri) ಗ್ರಾಮದಲ್ಲಿ ನಡೆದಿದೆ. ಪತ್ನಿ ಗಾಢ ನಿದ್ರೆಯಲ್ಲಿದ್ದಾಗ ಗಂಡನೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಶೋಭಾ ಪರಗೊಂಡ ಸಾರವಾಡ ಕೊಲೆಯಾದ ದುರ್ದೈವಿ. ಪತ್ನಿಯನ್ನೇ ಕಟುಕನಂತೆ ಕೊಂದ ಆರೋಪಿ ಪತಿ ಪರಗೊಂಡನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಠದಲ್ಲೇ ಇದ್ದು ಕೆಲಸ ಮಾಡುತ್ತಿದ್ದ ದಂಪತಿ
ಮೃತ ಶೋಭಾ ಹಾಗೂ ಆರೋಪಿ ಪರಗೊಂಡ ಮೂಲತಃ ಅಥಣಿ ತಾಲೂಕಿನ ಖವಟಖೊಪ್ಪ ಗ್ರಾಮದ ನಿವಾಸಿಗಳಾಗಿದ್ದಾರೆ.
ಕಳೆದ ಕೆಲವು ಸಮಯದಿಂದ ಇವರು ಉದ್ಯೋಗ ನಿಮಿತ್ತ ಅವಜೀಕರ ಮಠದಲ್ಲಿ ವಾಸವಿದ್ದರು. ಶೋಭಾ ಮಠದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರೆ, ಪತಿ ಪರಗೊಂಡ ಅದೇ ಮಠದಲ್ಲಿ ಚಾಲಕನಾಗಿ (ಡ್ರೈವರ್) ಕೆಲಸ ನಿರ್ವಹಿಸುತ್ತಿದ್ದನು.
ಸಂಶಯವೇ ಹೆಂಡತಿಯ ಜೀವಕ್ಕೆ ಕಂಟಕವಾಯ್ತು!
ಕಳೆದ ಕೆಲವು ದಿನಗಳಿಂದ ದಂಪತಿಗಳ ನಡುವೆ ಕೌಟುಂಬಿಕ ಕಲಹ ಜೋರಾಗಿತ್ತು. ಹೆಂಡತಿಯ ನಡತೆಯ ಬಗ್ಗೆ ಪರಗೊಂಡ ತೀವ್ರವಾಗಿ ಅನುಮಾನ ಪಡುತ್ತಿದ್ದನು. ಇದೇ ವಿಚಾರವಾಗಿ ದಂಪತಿಗಳ ಮಧ್ಯೆ ಪ್ರತಿದಿನ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಇದೇ ಸಂಶಯದ ಭರದಲ್ಲಿ, ಶೋಭಾ ಮಲಗಿದ್ದ ವೇಳೆ ಆರೋಪಿ ಪರಗೊಂಡ ಮಾರಕಾಸ್ತ್ರದಿಂದ ತೀವ್ರವಾಗಿ ಹಲ್ಲೆ ನಡೆಸಿ ಆಕೆಯನ್ನು ಕೊಂದೇ ಹಾಕಿದ್ದಾನೆ. ಈ ಭೀಕರ ಘಟನೆ ಕಟಗೇರಿ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.
ಸ್ಥಳಕ್ಕೆ ಪೊಲೀಸರ ಭೇಟಿ, ಗ್ರಾಮದಲ್ಲಿ ಆತಂಕ
ಕೊಲೆಯ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದು, ಕಟಗೇರಿ ಗ್ರಾಮದಲ್ಲಿ ಕೆಲಕಾಲ ಉದ್ವಿಗ್ನ ಹಾಗೂ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದ ತಕ್ಷಣ ಅಥಣಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ಪತಿ ಪರಗೊಂಡನನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.


