ಬೆಳಗಾವಿ: ಕುಂದಾನಗರಿಯ ರಸ್ತೆಗಳ ಸೌಂದರ್ಯ ಮತ್ತು ಪಾದಚಾರಿಗಳ ಹಿತದೃಷ್ಟಿಯಿಂದ ಬೆಳಗಾವಿ ಮಹಾನಗರ ಪಾಲಿಕೆ ಇಂದು ಅತಿಕ್ರಮಣದಾರರ ವಿರುದ್ಧ ಸಮರ ಸಾರಿದೆ. ನಗರದ ವಿವಿಧೆಡೆ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿಕೊಂಡಿದ್ದ ವ್ಯಾಪಾರಿಗಳಿಗೆ ಪಾಲಿಕೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದು, ಅತಿಕ್ರಮಿತ ಜಾಗದಲ್ಲಿ ಇಂದು ಜೆಸಿಪಿ ಗರ್ಜಿಸಿದೆ.
ಕಾರ್ಯಾಚರಣೆಯ ಮುಖ್ಯಾಂಶಗಳು:
ಪಾದಚಾರಿಗಳ ಹಿತವೇ ಮೊದಲು: ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗುವಂತೆ ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿಕೊಂಡಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸ್ವತಃ ಪಾಲಿಕೆ ಆಯುಕ್ತರಾದ ಕಾರ್ತಿಕ್ ಎಂ. ಅವರ ಸೂಚನೆ ಮೇರೆಗೆ ಈ ಬೃಹತ್ ತೆರವು ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ.
ಕ್ಲಬ್ ರಸ್ತೆಯಲ್ಲಿ ತೆರವು: ಚೆನ್ನಮ್ಮ ವೃತ್ತದಿಂದ ಹಿಡಿದು ಕ್ಲಬ್ ರಸ್ತೆಯ ಉದ್ದಕ್ಕೂ ಫುಟ್ಪಾತ್ ಮೇಲೆ ಹಾಕಲಾಗಿದ್ದ ತಾತ್ಕಾಲಿಕ ಶೆಡ್ಗಳು, ಬೋರ್ಡ್ಗಳು ಹಾಗೂ ಅನಧಿಕೃತ ಕಟ್ಟಡಗಳನ್ನು ಪಾಲಿಕೆ ಸಿಬ್ಬಂದಿ ನೆಲಸಮಗೊಳಿಸಿದರು.
ಪಾರ್ಕಿಂಗ್ ಉಲ್ಲಂಘನೆಗೆ ದಂಡದ ಬಿಸಿ: ಕೇವಲ ಅತಿಕ್ರಮಣ ಮಾತ್ರವಲ್ಲದೆ, ಸಂಚಾರ ನಿಯಮ ಉಲ್ಲಂಘಿಸುವವರಿಗೂ ಪಾಲಿಕೆ ಬಿಸಿ ಮುಟ್ಟಿಸಿದೆ. ಈಪ್ಪಾ ಹೋಟೆಲ್ (Hotel Niyaaz / Eppa) ಮುಂಭಾಗದ ಫುಟ್ಪಾತ್ ಹಾಗೂ ರಸ್ತೆ ಮೇಲೆ ಬೇಕಾಬಿಟ್ಟಿ ವಾಹನ ನಿಲುಗಡೆ ಮಾಡಿದ್ದ ಮಾಲೀಕರಿಗೆ ಶಾಕ್ ನೀಡಲಾಗಿದ್ದು, ಪ್ರತಿ ವಾಹನಕ್ಕೆ 5,000 ರೂಪಾಯಿಗಳಂತೆ ಭಾರೀ ಮೊತ್ತದ ದಂಡ ವಿಧಿಸಿ ಸ್ಥಳದಲ್ಲೇ ವಸೂಲಿ ಮಾಡಲಾಗಿದೆ.
"ನಗರದ ರಸ್ತೆಗಳು ಸಾರ್ವಜನಿಕರ ಸ್ವತ್ತು. ಪಾದಚಾರಿ ಮಾರ್ಗಗಳನ್ನು ವ್ಯಾಪಾರಕ್ಕೆ ಅಥವಾ ಪಾರ್ಕಿಂಗ್ಗೆ ಬಳಸಿಕೊಳ್ಳುವುದು ಕಾನೂನುಬಾಹಿರ. ಇಂತಹ ಕಾರ್ಯಾಚರಣೆಗಳು ಮುಂದಿನ ದಿನಗಳಲ್ಲೂ ಮುಂದುವರಿಯಲಿವೆ."
ಕಾರ್ತಿಕ್ ಎಂ., ಪಾಲಿಕೆ ಆಯುಕ್ತರು.
ಸಾರ್ವಜನಿಕರಿಗೆ ಎಚ್ಚರಿಕೆ: ಪಾಲಿಕೆಯ ಈ ಕಡಕ್ ಆ್ಯಕ್ಷನ್ ಕಂಡು ಅತಿಕ್ರಮಣದಾರರು ಕಂಗಾಲಾಗಿದ್ದಾರೆ. ಮುಂದಿನ ದಿನಗಳಲ್ಲಿ ರಸ್ತೆ ಮತ್ತು ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.
ವರದಿ :ಸದಾಶಿವ ಮಹಾಂತೇಶ್ ಎಸ್ ಹುಲಿಕಟ್ಟಿ

