ಬಳ್ಳಾರಿ: ಕೌಟುಂಬಿಕ ಕಲಹ ತಾರಕಕ್ಕೇರಿ, ಪತಿಯೊಬ್ಬ ತನ್ನ ಪತ್ನಿ ಹಾಗೂ ಹೆತ್ತ ಏಳು ತಿಂಗಳ ಹೆಣ್ಣು ಮಗುವನ್ನು ಅತ್ಯಂತ ಭೀಕರವಾಗಿ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಭೀಕರ ಘಟನೆ ನಗರದ ಅಂದ್ರಾಳ್ ಪ್ರದೇಶದಲ್ಲಿ ನಡೆದಿದೆ.
ಕೊಲೆಯಾದ ದುರ್ದೈವಿಗಳನ್ನು ರಾಜೇಶ್ವರಿ ಹಾಗೂ ಆಕೆಯ 7 ತಿಂಗಳ ಕಂದಮ್ಮ ಅಶ್ವಿನಿ ಎಂದು ಗುರುತಿಸಲಾಗಿದೆ.
ವರದಿಗಳ ಪ್ರಕಾರ, ಅಂದ್ರಾಳ್ ಪ್ರದೇಶದ ಮನೆಯಲ್ಲಿ ದಂಪತಿ ನಡುವೆ ತೀವ್ರ ಸ್ವರೂಪದ ಕೌಟುಂಬಿಕ ಕಲಹ ಏರ್ಪಟ್ಟಿತ್ತು. ಮಾತಿಗೆ ಮಾತು ಬೆಳೆದು ಆಕ್ರೋಶಗೊಂಡ ಪತಿ ಹೊನ್ನೂರಸ್ವಾಮಿ, ಮನೆಯಲ್ಲಿದ್ದ ಸುತ್ತಿಗೆಯಿಂದ ಪತ್ನಿ ರಾಜೇಶ್ವರಿ ಹಾಗೂ ಕಂದಮ್ಮ ಅಶ್ವಿನಿ ತಲೆಗೆ ಹೊಡೆದಿದ್ದಾನೆ. ಪೆಟ್ಟು ತೀವ್ರವಾಗಿದ್ದರಿಂದ ತಾಯಿ-ಮಗು ಇಬ್ಬರೂ ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ದುಷ್ಕೃತ್ಯ ಎಸಗಿದ ಬಳಿಕ ಆರೋಪಿ ಹೊನ್ನೂರಸ್ವಾಮಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಪಾಪಿ ಪತಿ ಹೊನ್ನೂರಸ್ವಾಮಿಗಾಗಿ ಜಾಲ ಬೀಸಿದ್ದಾರೆ.


