ನವದೆಹಲಿ : ಮದುವೆಗೂ ಮುನ್ನ ಪರಸ್ಪರ ಒಪ್ಪಿಗೆಯಿಂದ ದೈಹಿಕ ಸಂಬಂಧ ಹೊಂದುವ ಕುರಿತು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ತೆಲಂಗಾಣ ಪೊಲೀಸ್ ನೇಮಕಾತಿ ಮಂಡಳಿಗೆ ಹಿನ್ನಡೆಯಾಗಿದೆ.
ಪರಸ್ಪರ ಒಪ್ಪಿಗೆಯಿಂದ ವಯಸ್ಕರು ಮದುವೆಗೂ ಮುನ್ನ ದೈಹಿಕ ಸಂಬಂಧ ಹೊಂದುವುದನ್ನು ತಪ್ಪೆಂದು ಪರಿಗಣಿಸಲಾಗದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಈ ಐತಿಹಾಸಿಕ ತೀರ್ಪಿನ ಮೂಲಕ, ಹಳೆಯ ಪ್ರಕರಣವೊಂದನ್ನು ನೆಪವಾಗಿಟ್ಟುಕೊಂಡು ಅಭ್ಯರ್ಥಿಯೊಬ್ಬರಿಗೆ ಉದ್ಯೋಗ ನಿರಾಕರಿಸಿದ್ದ ತೆಲಂಗಾಣ ಪೊಲೀಸ್ ನೇಮಕಾತಿ ಮಂಡಳಿಯ ನಿರ್ಧಾರವನ್ನು ನ್ಯಾಯಾಲಯ ರದ್ದುಗೊಳಿಸಿದೆ. ತನ್ನ ಅರ್ಜಿಯಲ್ಲಿ ಸತ್ಯವನ್ನು ಮುಚ್ಚಿಡದ ಅಭ್ಯರ್ಥಿಯ ಪ್ರಾಮಾಣಿಕತೆಯನ್ನು ಮೆಚ್ಚಿದ ನ್ಯಾಯಪೀಠ, ತಕ್ಷಣವೇ ಅವರಿಗೆ ಪೊಲೀಸ್ ಕಾನ್ಸ್ಟೇಬಲ್ ಉದ್ಯೋಗ ನೀಡುವಂತೆ ಆದೇಶಿಸಿದೆ.
ಇಬ್ಬರು ವಯಸ್ಕರು (ಮೇಜರ್) ಸ್ವಇಚ್ಛೆಯಿಂದ ಒಟ್ಟಿಗೆ ಇದ್ದರೆ, ಅದನ್ನು ‘ನೈತಿಕ ಪತನ’ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಪ್ರೀತಿಸುವ ಪ್ರತಿಯೊಂದು ಸಂಬಂಧವು ಮದುವೆಯಾಗಿಯೇ ತೀರಬೇಕು ಎಂದೇನಿಲ್ಲ. ಕೇವಲ ಮದುವೆಯಾಗಲಿಲ್ಲ ಎಂಬ ಕಾರಣಕ್ಕೆ ಒಬ್ಬರು ಇನ್ನೊಬ್ಬರನ್ನು ಮೋಸ ಮಾಡಿದ್ದಾರೆ ಎಂದು ಹೇಳಲಾಗದು. ಇದರ ಆಧಾರದ ಮೇಲೆ ಯಾರ ವ್ಯಕ್ತಿತ್ವವನ್ನೂ (Character) ಪ್ರಶ್ನಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಪೊಲೀಸ್ ಮಂಡಳಿಗೆ ಹಿನ್ನಡೆ: ತೆಲಂಗಾಣದ ಗಜವೇಲ್ನ ನಿವಾಸಿ ಗಾಜುಲ ತಿರುಪತಿ ಎಂಬ ಅಭ್ಯರ್ಥಿಯ ಆಯ್ಕೆಯನ್ನು ರದ್ದುಪಡಿಸಿದ್ದ ತೆಲಂಗಾಣ ಪೊಲೀಸ್ ನೇಮಕಾತಿ ಮಂಡಳಿಯ ನಿರ್ಧಾರವನ್ನು ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರ ಪೀಠವು ರದ್ದುಗೊಳಿಸಿದೆ.
2014ರ ಹಳೆಯ ಪ್ರಕರಣವೊಂದನ್ನು ಉಲ್ಲೇಖಿಸಿ, ಅಭ್ಯರ್ಥಿಯ ನಡವಳಿಕೆ ಸರಿ ಇಲ್ಲ ಎಂದು ಮಂಡಳಿ ಆತನಿಗೆ ಉದ್ಯೋಗ ನಿರಾಕರಿಸಿತ್ತು.
ಆದರೆ, ಅಭ್ಯರ್ಥಿ ತಿರುಪತಿ ತನ್ನ ಅರ್ಜಿಯಲ್ಲೇ ಆ ಪ್ರಕರಣದ ವಿವರಗಳನ್ನು ಬಹಳ ಪ್ರಾಮಾಣಿಕವಾಗಿ ಬಹಿರಂಗಪಡಿಸಿದ್ದನ್ನು ನ್ಯಾಯಾಲಯ ಪ್ರಶಂಸಿಸಿತು.
ಉದ್ಯೋಗ ನೀಡಲು ಆದೇಶ: ತಪ್ಪು ಮಾಹಿತಿ ನೀಡದೆ ಸತ್ಯವನ್ನು ಬಹಿರಂಗಪಡಿಸಿದ ಅಭ್ಯರ್ಥಿಗೆ ಉದ್ಯೋಗ ನಿರಾಕರಿಸುವುದು ಸರಿಯಲ್ಲ ಎಂದಿರುವ ಸುಪ್ರೀಂ ಕೋರ್ಟ್, ಆತನಿಗೆ ಕೂಡಲೇ ಪೊಲೀಸ್ ಕಾನ್ಸ್ಟೇಬಲ್ ಉದ್ಯೋಗ ನೀಡುವಂತೆ ಆದೇಶಿಸಿದೆ.

