ಹುಬ್ಬಳ್ಳಿ : ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಈ ಬಾರಿ ಹಿಂದೂತ್ವದ ಅಲೆ ಜೋರಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಿಂದೂ ಕಾರ್ಯಕರ್ತರ ರಕ್ಷಣೆ, ಗೋ ರಕ್ಷಣೆ ಹಾಗೂ ಹಿಂದೂ ಸಂಘಟನೆಗಳ ಬಲವರ್ಧನೆ ಎಂಬ ಪ್ರಮುಖ ಉದ್ದೇಶಗಳೊಂದಿಗೆ ಹಿಂದೂಸ್ತಾನ ಜನತಾ ಪಾರ್ಟಿ ಚುನಾವಣಾ ಕಣಕ್ಕಿಳಿದಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಹಿಂದೂ ಮುಖಂಡರು ಈ ಬಾರಿ ಒಂದಾಗಿ ಕಾರ್ಯನಿರ್ವಹಿಸಲು ಮುಂದಾಗಿದ್ದು, ಪಕ್ಷದ ಬಲವರ್ಧನೆಗೆ ಕೈಜೋಡಿಸಿದ್ದಾರೆ. ಕಾರ್ಯಕರ್ತರಲ್ಲಿ ಡೊಂಗಿ ಹಿಂದೂ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕೆಂಬ ನಿಲುವು ಸ್ಪಷ್ಟವಾಗಿ ಕಾಣಿಸುತ್ತಿದೆ ಎನ್ನಲಾಗಿದೆ.
ಪಕ್ಷದ ರಾಜ್ಯಾಧ್ಯಕ್ಷ ಶ್ರೀ ವಿನಾಯಕ ಮಾಳದಕರ ಮಾತನಾಡಿ, “ಈ ಚುನಾವಣೆ ಕೇವಲ ರಾಜಕೀಯ ಸ್ಪರ್ಧೆಯಲ್ಲ. ಇದು ಹಿಂದೂ ಸಮುದಾಯದ ಗೌರವ ಹಾಗೂ ಹಕ್ಕುಗಳ ರಕ್ಷಣೆಗೆ ನಡೆಯುತ್ತಿರುವ ಹೋರಾಟವಾಗಿದೆ. ಮತದಾರರು ಜಾಗೃತಿಯಿಂದ ಹಾಗೂ ವಿವೇಕದಿಂದ ತಮ್ಮ ನಿರ್ಧಾರ ಕೈಗೊಳ್ಳಬೇಕು,” ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಡಾ. ಈಶ್ವರಗೌಡ ಪಾಟೀಲ, ಎಲ್.ಕೆ. ಸುವರ್ಣ, ರಾಜ್ಯ ಕಾರ್ಯಾಧ್ಯಕ್ಷ ಗಣೇಶ್ ಕಡಂ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪಕ್ಷದ ಅಭ್ಯರ್ಥಿ ಅಡ್ವೊಕೇಟ್ ಲಕ್ಷ್ಮಣ ಮೊರಬ ಅವರ ಪರ ಸಂಘಟಿತವಾಗಿ ಕಾರ್ಯನಿರ್ವಹಿಸುವ ಸಂಕಲ್ಪವನ್ನು ಮುಖಂಡರು ವ್ಯಕ್ತಪಡಿಸಿದರು.
ವರದಿ : ಸುಧೀರ್ ಕುಲಕರ್ಣಿ

