ಕೊರಡಂಪಳ್ಳಿಯಲ್ಲಿ ಸಂಪ್ರದಾಯಬದ್ಧ ಆಚರಣೆ; ಉತ್ತಮ ಮಳೆ ಹಾಗೂ ಸಮೃದ್ಧ ಬೆಳೆಗಾಗಿ ಗ್ರಾಮಸ್ಥರ ಪ್ರಾರ್ಥನೆ
ಚಿಂಚೋಳಿ : ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕೊರಡಂಪಳ್ಳಿ ಗ್ರಾಮದಲ್ಲಿ ಉತ್ತಮ ಮಳೆಯಾಗಲಿ ಹಾಗೂ ರೈತರ ಬೆಳೆಗಳು ಸಮೃದ್ಧಿಯಾಗಲಿ ಎಂಬ ಆಶಯದೊಂದಿಗೆ ಗ್ರಾಮಸ್ಥರು ಸಂಪ್ರದಾಯಬದ್ಧವಾಗಿ ಕಪ್ಪೆಗಳ ಮದುವೆ ನೆರವೇರಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಮಳೆರಾಯನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮಹಿಳೆಯರು ಮಳೆರಾಯನನ್ನು ಕೋರಿಕೊಂಡು ಸಾಂಪ್ರದಾಯಿಕ ಜನಪದ ಹಾಡುಗಳನ್ನು ಹಾಡುತ್ತಾ ಗ್ರಾಮದ ಪ್ರತಿಯೊಂದು ಬೀದಿ ಹಾಗೂ ಗಲ್ಲಿಗಳಲ್ಲಿ ಸಂಚರಿಸಿದರು. ಮೆರವಣಿಗೆ ಸಾಗುವ ವೇಳೆ ಗ್ರಾಮದ ಮುತ್ತೈದೆಯರು ನೀರನ್ನು ಎರಚುತ್ತಾ ಉತ್ತಮ ಮಳೆಯಾಗಲೆಂದು ಭಕ್ತಿಭಾವದಿಂದ ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ರೈತರು, ಹಿರಿಯರು, ಗ್ರಾಮ ಮುಖಂಡರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆಗಳು ಯಶಸ್ವಿಯಾಗಲಿ ಹಾಗೂ ರೈತರ ಬದುಕು ಹಸನಾಗಲಿ ಎಂದು ಪ್ರಾರ್ಥಿಸಿದರು.
ಗ್ರಾಮದಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಈ ವಿಶಿಷ್ಟ ಸಂಪ್ರದಾಯವು ಪ್ರಕೃತಿಯೊಂದಿಗೆ ಗ್ರಾಮೀಣ ಬದುಕಿನ ಅವಿನಾಭಾವ ಸಂಬಂಧವನ್ನು ಪ್ರತಿಬಿಂಬಿಸುವುದರ ಜೊತೆಗೆ, ರೈತರ ಆಶಾಭಾವನೆ, ಭಕ್ತಿ ಹಾಗೂ ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿಯಾಗಿದೆ. ಮಳೆಗಾಗಿ ನಡೆಸಲಾದ ಈ ವಿಶೇಷ ಆಚರಣೆಯು ಗ್ರಾಮಸ್ಥರಲ್ಲಿ ಒಗ್ಗಟ್ಟು ಮತ್ತು ಭಕ್ತಿಭಾವವನ್ನು ಮೂಡಿಸಿತು.
ವರದಿ : ಸುನಿಲ್ ಸಲಗರ


