ನವದೆಹಲಿ: ಆಸ್ತಿಗಳ ಮೇಲಿನ 'ಜಮಾಬಂದಿ' ಮತ್ತು 'ಖಸ್ರಾ ಗಿರ್ದಾವರಿ' (ಬೆಳೆ ಪರಿಶೀಲನಾ ನೋಂದಣಿ) ಮುಂತಾದ ಕಂದಾಯ ದಾಖಲೆಗಳು ಆಸ್ತಿಯ ಮೇಲಿನ ಸಾಗುವಳಿ ಅಥವಾ ಸುಪರ್ದಿಯ ಸ್ವರೂಪ ಮತ್ತು ನಿರಂತರತೆಯನ್ನು ತೋರಿಸಬಲ್ಲವೇ ಹೊರತು, ಅವು ಆಸ್ತಿಯ ಮಾಲೀಕತ್ವ ಅಥವಾ ಹಕ್ಕನ್ನು (ಟೈಟಲ್) ಹೊಸದಾಗಿ ಸೃಷ್ಟಿಸಲು ಅಥವಾ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪಂಜಾಬ್ನ ಮುಕ್ತಸರ್ ಜಿಲ್ಲೆಯ ಧಾರ್ಮಿಕ ಸಂಸ್ಥೆಯೊಂದಕ್ಕೆ ಸೇರಿದ ಕೃಷಿ ಭೂಮಿಗೆ ಸಂಬಂಧಿಸಿದಂತೆ ದಶಕಗಳಿಂದ ನಡೆಯುತ್ತಿದ್ದ ಜಮೀನು ವಿವಾದದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸುವಾಗ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ನ್ಯಾಯಮೂರ್ತಿ ಚಂದ್ರಶೇಖರ್ ಅವರನ್ನೊಳಗೊಂಡ ಪೀಠವು ಈ ಮಹತ್ವದ ತೀರ್ಪು ನೀಡಿದೆ.ಕಂದಾಯ ದಾಖಲೆಗಳು ಕೇವಲ ತೆರಿಗೆ ಸಂಗ್ರಹದ ಉದ್ದೇಶಕ್ಕಷ್ಟೇ ಪ್ರಾಥಮಿಕವಾಗಿರುತ್ತವೆ.
ಸುಪರ್ದಿಯನ್ನು ಸಾಬೀತುಪಡಿಸಲು ಅವು ಸಹಕಾರಿಯಾಗಿದ್ದರೂ, ಮಾಲೀಕತ್ವವನ್ನು ನಿರ್ಣಯಿಸಲು ಅವುಗಳನ್ನೇ ಅಂತಿಮ ಅಥವಾ ಸಾಗರ ಸಾಕ್ಷಿ ಎಂದು ಪರಿಗಣಿಸಲಾಗುವುದಿಲ್ಲ ಎಂದು ಪೀಠವು ತಿಳಿಸಿದೆ.
ದೀರ್ಘಕಾಲದವರೆಗೆ ಆಸ್ತಿಯನ್ನು ತನ್ನ ವಶದಲ್ಲಿ ಇಟ್ಟುಕೊಂಡಿರುವುದು ಅಥವಾ ಧಾರ್ಮಿಕ ಕಾರ್ಯಾಚರಣೆಗಾಗಿ ಭೂಮಿಯನ್ನು ಸಾಗುವಳಿ ಮಾಡುತ್ತಿರುವುದಾಗಿ ಕಂದಾಯ ದಾಖಲೆಯಲ್ಲಿ ನಮೂದಾಗಿರುವುದು ಮಾತ್ರಕ್ಕೆ ಆಸ್ತಿಯು ಸಂಸ್ಥೆಗೆ ಶಾಶ್ವತವಾಗಿ ದಾನವಾಗಿದೆ ಎಂದಾಗಲಿ ಅಥವಾ 'ಪ್ರತಿಕೂಲ ಸ್ವಾಧೀನ' (ಅಡ್ವರ್ಸ್ ಪೊಸೆಷನ್) ಅಡಿಯಲ್ಲಿ ಮಾಲೀಕತ್ವ ಬಂದಿದೆ ಎಂದಾಗಲಿ ಪ್ರತಿಪಾದಿಸಲು ಬರುವುದಿಲ್ಲ.ಮಾಲೀಕತ್ವವನ್ನು ನಿರಾಕರಿಸಿ, ಹಕ್ಕುದಾರರ ವಿರುದ್ಧವಾಗಿ ಶತ್ರುತ್ವ ಭಾವದಿಂದ ಆಸ್ತಿಯನ್ನು ವಶಪಡಿಸಿಕೊಂಡ ದಿನಾಂಕ ಮತ್ತು ನಡವಳಿಕೆಯನ್ನು ಸ್ಪಷ್ಟವಾಗಿ ನಿರೂಪಿಸದ ಹೊರತು ಪ್ರತಿಕೂಲ ಸ್ವಾಧೀನ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ


