ತುರುವೇಕೆರೆ : ತಾಲ್ಲೂಕಿನ ಅತ್ತಿಕುಳ್ಳೆಪಾಳ್ಯದ ಶ್ರೀ ಶನಿದೇವರ ದೇವಾಲಯದಲ್ಲಿ ಮೇ 16 ರಂದು ಶನಿವಾರ 25 ನೇ ವರ್ಷದ ಶ್ರೀ ಶನೇಶ್ಚರ ಜಯಂತಿ ಮಹೋತ್ಸವವನ್ನು ಆಯೋಜಿಸಲಾಗಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ಟಿ.ಎನ್.ಮಂಜುನಾಥ್ (ಅಮಾನಿಕೆರೆ) ತಿಳಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ವೈಶಾಖ ಬಹುಳ ಅಮಾವಾಸ್ಯೆಯಂದು ಶ್ರೀ ಶನೇಶ್ಚರ ಜಯಂತಿ ಮಹೋತ್ಸವ ಆಚರಿಸಲಾಗುತ್ತಿದೆ. ಬೆಳಿಗ್ಗೆ 9 ಗಂಟೆಗೆ ಶ್ರೀ ಮಹಾಗಣಪತಿ, ಶ್ರೀ ಶನೇಶ್ಚರ ಸ್ವಾಮಿ ಹಾಗೂ ನವಗ್ರಹ ದೇವತೆಗಳಿಗೆ ಫಲಪಂಚಾಮೃತ ಅಭಿಷೇಕ, ಷೋಡಷೋಪಚಾರ ಪೂಜೆ, ವಿಶೇಷ ಹೂವಿನ ಅಲಂಕಾರ ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ, 1 ಗಂಟೆಗೆ ಗೋಪೂಜೆ, ಗೋಗ್ರಾಸ, ನಂತರ ಸಾರ್ವಜನಿಕರಿಗೆ ಅನ್ನದಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಂಜೆ 4 ಗಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸ್ವಾಮಿಯವರ ಉತ್ಸವವನ್ನು ನಡೆಸಲಾಗುತ್ತದೆ ಎಂದರು.
ಮೇ 16 ರಂದು ಶ್ರೀ ಶನೇಶ್ಚರ ದೇವಾಲಯದಲ್ಲಿ ಸಾರ್ವಜನಿಕರಿಂದ ಸಾರ್ವಜನಿಕರಿಗೆ ಅನ್ನದಾನ ಕಾರ್ಯಕ್ರಮ ಇರುವುದರಿಂದ ಮೇ 15 ರಂದು ದೇವಾಲಯದ ಕಾರ್ಯಕರ್ತರು ಟ್ರಾಕ್ಟರ್ ಮೂಲಕ ತುರುವೇಕೆರೆ, ತಾವರೆಕೆರೆ, ಆನಂದನಪಾಳ್ಯ, ಮುನಿಯೂರು, ಅತ್ತಿಕುಳ್ಳೆಪಾಳ್ಯ, ವಿವೇಕಾನಂದ ನಗರ, ಗೊಟ್ಟಿಕೆರೆ, ಗೊಟ್ಟಿಕೆರೆ ಪಾಳ್ಯ, ಶ್ರೀರಾಮಪುರ ಗ್ರಾಮಗಳಿಗೆ ಭೇಟಿ ನೀಡಲಿದ್ದು, ಭಕ್ತಾಧಿಗಳು ಅನ್ನಸಂತರ್ಪಣೆಗೆ ತಮ್ಮ ಕೈಲಾದ ದವಸ, ಧಾನ್ಯವನ್ನು ನೀಡಬಹುದಾಗಿದೆ ಹಾಗೂ ಮೇ 16 ರಂದು ಜಯಂತಿಯಲ್ಲಿ ಪಾಲ್ಗೊಂಡು ಸ್ವಾಮಿಯವರ ಪ್ರಸಾದ ಸ್ವೀಕರಿಸಲು ಕೋರಿದರು.
ಇದಲ್ಲದೆ 2026 ರ ಡಿಸೆಂಬರ್ 07 ರಂದು ಅತ್ತಿಕುಳ್ಳೆಪಾಳ್ಯದಲ್ಲಿ ಶ್ರೀ ಶನೇಶ್ಚರ ಸ್ವಾಮಿ ದೇವಾಲಯದ 25 ನೇ ವರ್ಷದ ಬೆಳ್ಳಿ ಹಬ್ಬದ ವಾರ್ಷಿಕೋತ್ಸವ ಸಮಾರಂಭ ನಡೆಯಲಿದ್ದು, ಒಂದು ವಾರಗಳ ಕಾಲ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ಅತ್ತಿಕುಳ್ಳೆಪಾಳ್ಯ ಗ್ರಾಮ ಪ್ರವೇಶಿಸುವ ಪ್ರಾರಂಭದಲ್ಲಿ ಶ್ರೀ ಶನಿದೇವರ ದೇವಾಲಯದ ಹೆಬ್ಬಾಗಿಲು ನಿರ್ಮಿಸಲು ಈಗಾಗಲೇ ಯೋಜನೆ ರೂಪಿಸಿ, ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಶಿವಾರ ಪಟ್ಟಣದಲ್ಲಿ ಹೆಬ್ಬಾಗಿಲಿನ ಕಲ್ಲಿನ ಕೆತ್ತನೆ ಕೆಲಸ ಪ್ರಾರಂಭವಾಗಿದೆ. ಈ ಕಾರ್ಯಕ್ಕೆ ಭಕ್ತಾಧಿಗಳು ತಮ್ಮ ಕೈಲಾದ ಧನ ಸಹಾಯ ಮಾಡಬೇಕೆಂದು ಸಹ ವಿನಂತಿಸಿದರು.
ವರದಿ: ಗಿರೀಶ್ ಕೆ ಭಟ್

