ನವೆಂಬರ್ 23ರ ಭಾನುವಾರ ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಭಾರತದ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಹಾಗೂ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ವೈವಾಹಿಕ ಜೀವನಕ್ಕೆ ಕಾಲಿಡಬೇಕಿತ್ತು.
ಆದರೆ ಅಂದು ಬೆಳಗ್ಗೆ ತಿಂಡಿ ಮುಗಿಸಿದ ಬಳಿಕ ಸ್ಮೃತಿ ಮಂಧಾನ ತಂದೆ ಶ್ರೀನಿವಾಸ್ ಮಂಧಾನ ಅನಾರೋಗ್ಯದಿಂದ ಕುಸಿದುಬಿದ್ದು ಆಸ್ಪತ್ರೆಗೆ ದಾಖಲಾದ ಕಾರಣ ವಿವಾಹ ಮುಂದೂಡಲಾಗಿದೆ ಎಂದು ಘೋಷಿಸಲಾಗಿತ್ತು.
ಆದರೆ ಕೆಲ ಸಮಯ ಕಳೆಯುತ್ತಿದ್ದಂತೆ ಸ್ಮೃತಿ ಮಂಧಾನ ವಿವಾಹ ಮುಂದೂಡಿಕೆಗೆ ಆಕೆ ತಂದೆಯ ಅನಾರೋಗ್ಯ ಅಲ್ಲ ಸ್ಮೃತಿ ಮಂಧಾನ ಜತೆ ಹಸೆಮಣೆ ಏರಬೇಕಿದ್ದ ಪಲಾಶ್ ಮುಚ್ಚಲ್ ವೈಯಕ್ತಿಕ ವಿಷಯ ಕಾರಣ ಎಂಬ ಸುದ್ದಿ ಆಚೆ ಬಿದ್ದಿತ್ತು.
ಪಲಾಶ್ ಬೇರೆ ಯುವತಿಯರ ಜತೆ ಅಸಭ್ಯ ಸಂದೇಶಗಳನ್ನು ಮಾಡಿದ್ದ ಹಾಗೂ ಕೊರಿಯೊಗ್ರಫರ್ ಜತೆ ಅಕ್ರಮ ಸಂಬಂಧ ಹೊಂದಿದ್ದ ಎಂದೆಲ್ಲ ಸಾಮಾಜಿಕ ಜಾಲತಾಣದಲ್ಲಿ ಆರೋಪಗಳು ಕೇಳಿಬಂದಿದ್ದವು.
ಆದರೆ ಈ ಕುರಿತು ಸ್ಮೃತಿ ಮಂಧಾನ ಆಗಲಿ ಅಥವಾ ಪಲಾಶ್ ಆಗಲಿ ಎಲ್ಲಿಯೂ ಅಧಿಕೃತವಾಗಿ ಹೇಳಿರಲಿಲ್ಲ. ಆದರೆ ಇದೀಗ ಸ್ಮೃತಿ ಮಂಧಾನ ಈ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಹಂಚಿಕೊಳ್ಳುವ ಮೂಲಕ ಮದುವೆ ರದ್ದಾಗಿರುವುದನ್ನು ಖಾತರಿಪಡಿಸಿದ್ದಾರೆ.
ಕಳೆದ ಕೆಲ ವಾರಗಳಿಂದ ನನ್ನ ಹಾಗೂ ನನ್ನ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿದ್ದು ಪ್ರತಿಕ್ರಿಯಿಸಬೇಕಾದ ಸಮಯ. ನಾನು ಖಾಸಗಿ ಜೀವನವನ್ನು ಗೌಪ್ಯವಾಗಿಡುವ ವ್ಯಕ್ತಿಯಾಗಿದ್ದು, ಅದೇ ರೀತಿ ಇರಲು ಇಚ್ಛಿಸುವವಳು, ಆದರೆ ನನ್ನ ಮದುವೆ ರದ್ದಾಗಿರುವುದನ್ನು ಹೇಳಲು ಇಚ್ಛಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಇದನ್ನು ಇಲ್ಲಿಗೆ ಮುಗಿಸುತ್ತಿದ್ದೇನೆ ಹಾಗೂ ನಿಮ್ಮಲ್ಲೂ ಅದನ್ನೇ ಮನವಿ ಮಾಡಿಕೊಳ್ಳುತ್ತಿದ್ದೇನೆ. ನೀವು ಎರಡೂ ಕುಟುಂಬಗಳ ಗೌಪ್ಯತೆಯನ್ನು ಗೌರವಿಸಿ ನಮ್ಮ ಪಾಡಿಗೆ ಜೀವಿಸಲು ಬಿಡಿ. ಎಲ್ಲರಿಗೂ ದೊಡ್ಡ ಉದ್ದೇಶಗಳಿರುತ್ತದೆ ಹಾಗೂ ನನಗೆ ದೇಶವನ್ನು ಪ್ರತಿನಿಧಿಸುವುದು ದೊಡ್ಡ ಉದ್ದೇಶ. ನನಗೆ ಆಟವನ್ನಾಡಿ ಭಾರತಕ್ಕೆ ಇನ್ನೂ ಹೆಚ್ಚು ಟ್ರೋಫಿಗಳನ್ನು ತಂದುಕೊಡುವ ಉದ್ದೇಶವಿದೆ ಹಾಗೂ ಅದರ ಮೇಲೆ ನನ್ನ ಗಮನವಿರಲಿದೆ. ನಿಮ್ಮ ಬೆಂಬಲಕ್ಕೆ ಧನ್ಯವಾದ, ಇದು ಮುನ್ನಡೆಯುವ ಸಮಯ ಎಂದು ಸ್ಮೃತಿ ಮಂಧಾನ ತಿಳಿಸಿದ್ದಾರೆ.




