ತುರುವೇಕೆರೆ: –ಪಟ್ಟಣದ ರೋಟರಿ ಕ್ಲಬ್ ವತಿಯಿಂದ ನಿರ್ಮಿಸಲಾಗಿರುವ ರೋಟರಿ ಭವನದ ಎರಡನೇ ಅಂತಸ್ತಿನ ಕಟ್ಟಡ ಕಾಮಗಾರಿಗೆ ತಮ್ಮಡಿಹಳ್ಳಿಯ ಶ್ರೀ ಅಭಿನವ ಮಲ್ಲಿಕಾರ್ಜುನ ದೇಶೀಕೇಂದ್ರ ಮಹಾಸ್ವಾಮಿಗಳು ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಪೂಜ್ಯ ಶ್ರೀಗಳು, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು ನಿಸ್ವಾರ್ಥ ಸೇವಾ ಮನೋಭಾವದಿಂದ ರೋಟರಿ ಹಾಗೂ ಲಯನ್ಸ್ ಸಂಸ್ಥೆಗಳು ಜನಪರವಾಗಿ ಕಾರ್ಯನಿರ್ವಹಿಸುತ್ತಿವೆ. ಇಂತಹ ಸಂಸ್ಥೆಗಳ ಸಾಮಾಜಿಕ ಸೇವೆಯಿಂದಾಗಿ ಸಮಾಜದ ಅಶಕ್ತರು, ಬಡವರು, ಕೂಲಿಕಾರ್ಮಿಕರಿಗೆ ಅನುಕೂಲವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಉಚಿತ ಆರೋಗ್ಯ ಶಿಬಿರ ಸೇರಿದಂತೆ ಹತ್ತಾರು ಜನಪರ ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘ ಸಂಸ್ಥೆಗಳು ನಡೆಸುವುದರಿಂದ ಸರ್ಕಾರದ ಮೇಲಿನ ಕೆಲವೊಂದು ಭಾರವೂ ಕಡಿಮೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ತುರುವೇಕೆರೆ ರೋಟರಿ ಕ್ಲಬ್ ಪ್ರಾರಂಭದ ದಿನದಿಂದಲೂ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದೆ. ಸ್ಥಾಪಕ ಅಧ್ಯಕ್ಷ ಎನ್.ಆರ್.ಜಯರಾಮ್ ಅವರಿಂದ ಇಲ್ಲಿಯವರೆಗೂ ಅಧ್ಯಕ್ಷ, ಪದಾಧಿಕಾರಿಗಳೆಲ್ಲರೂ ಉತ್ತಮ ರೀತಿಯಲ್ಲಿ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವುದು ಶ್ಲಾಘನೀಯ ವಿಚಾರವಾಗಿದೆ. ಪ್ರಕಾಶ್ ಗುಪ್ತ ಅವರು ಉದಾರ ಮನಸ್ಸಿನಿಂದ ರೋಟರಿ ಸಂಸ್ಥೆಗೆ ನಿವೇಶನ ನೀಡಿ ಹೆಚ್ಚಿನ ಸೇವೆಗೆ ಅವಕಾಶ ಕಲ್ಪಿಸಿದ್ದು, ಇಂದು ರೋಟರಿ ಭವನ ಎರಡನೇ ಅಂತಸ್ತಿನ ಕಾಮಗಾರಿಗೆ ಚಾಲನೆ ದೊರಕುವಷ್ಟರ ಮಟ್ಟಿಗೆ ಬೆಳೆದಿದೆ ಎಂದ ಅವರು, ರೋಟರಿ ಭವನದ ಎರಡನೇ ಅಂತಸ್ತಿನ ಕಾಮಗಾರಿಗೆ 25 ಸಾವಿರ ರೂಗಳನ್ನು ಕಾಣಿಕೆ ರೂಪದಲ್ಲಿ ನೀಡುವುದಾಗಿ ಭರವಸೆ ನೀಡಿದರು.
ರೋಟರಿ ಕ್ಲಬ್ ಅಧ್ಯಕ್ಷ ಸಾ.ಶಿ.ದೇವರಾಜ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕ ಅಧ್ಯಕ್ಷ ಎನ್.ಆರ್.ಜಯರಾಮ್, ಜಿಲ್ಲಾ ಕಾರ್ಯದರ್ಶಿ ಬಿಳಿಗೆರೆ ಶಿವಕುಮಾರ್, ರೋಟರಿ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಗುಪ್ತ, ಕಾರ್ಯದರ್ಶಿ ಶಿವರಾಜ್, ರೋಟರಿ ಪದಾಧಿಕಾರಿಗಳಾದ ಎಸ್.ಎಲ್.ಎನ್. ರಾಜಣ್ಣ, ಲೋಕೇಶ್, ಗಿರೀಶ್, ಸತ್ಯನಾರಾಯಣ್, ಪ್ರಭುಸ್ವಾಮಿ, ಡಾ.ಚೇತನ್, ತುಕಾರಾಮ್, ಸುರೇಶ್, ಮಹೇಶ್, ಬಿಎಂಎಸ್ ಉಮೇಶ್, ತ್ರಿಜಯ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್