ತುರುವೇಕೆರೆ: –ತಾಲ್ಲೂಕು ಆಡಳಿತದ ವತಿಯಿಂದ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮನವರ 200 ನೇ ಜಯಂತಿಯನ್ನು ತಾಲ್ಲೂಕು ಕಛೇರಿಯಲ್ಲಿ ಸರಳವಾಗಿ ಆಚರಿಸಲಾಯಿತು. ಉಪತಹಸೀಲ್ದಾರ್ ಸುಮತಿ ಅವರು ರಾಣಿ ಚೆನ್ನಮ್ಮನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಯಂತಿಗೆ ಚಾಲನೆ ನೀಡಿದರು.
ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪದ ಸ್ಥಾಪಕ ಅಧ್ಯಕ್ಷೆ ಗೀತಾಸುರೇಶ್ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮನವರ ಧೈರ್ಯ, ಹೋರಾಟ, ಸ್ವಾಭಿಮಾನ ಮಹಿಳಾಕುಲಕ್ಕೆ ಸ್ಪೂರ್ತಿದಾಯಕವಾದುದು. ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ವೀರಮರಣವನ್ನಪ್ಪಿದ ಚೆನ್ನಮ್ಮನವರ ತ್ಯಾಗ, ಆದರ್ಶ ನಮ್ಮೆಲ್ಲರಿಗೂ ದಾರಿದೀಪವಾಗಿದೆ. ಅಂತಹ ಹೋರಾಟಗಾರ್ತಿ ನಮ್ಮ ಕನ್ನಡನಾಡಿನವರು ಎಂದು ಹೇಳಿಕೊಳ್ಳಲು ಬಹಳ ಹೆಮ್ಮಯಾಗುತ್ತದೆ. ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡುವಂತೆ ಮಾಡಿರುವುದು ಸ್ವಾಗತಾರ್ಹ ಸಂಗತಿಯಾಗಿದೆ. ಚೆನ್ನಮ್ಮನವರ ಜಯಂತಿ ಕೇವಲ ಸರ್ಕಾರಿ ಕಛೇರಿಯಲ್ಲಿ ಮಾತ್ರವಲ್ಲ, ಪ್ರತಿ ಶಾಲೆಗಳಲ್ಲಿ, ಮನೆಮನೆಗಳಲ್ಲಿ ನಡೆಯುವಂತಾಗಬೇಕು. ಮುಂದಿನ ಪೀಳಿಗೆಗೆ ರಾಣಿ ಚೆನ್ನಮ್ಮರಂತೆ ಸ್ವಾತಂತ್ರಕ್ಕಾಗಿ ಹೋರಾಟ ನಡೆಸಿದ ವೀರಮಹಿಳೆಯರ ಆದರ್ಶಗಳನ್ನು ತಲುಪಿಸುವ ಕೆಲಸವಾಗಬೇಕಿದೆ ಎಂದರು.
ಮುಖಂಡ ಶ್ರೀಕಾಂತ ರಾಜ್ ಅರಸ್ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮನವರ 200 ನೇ ವರ್ಷದ ಜಯಂತಿಯನ್ನು ಸರ್ಕಾರ ಆಚರಿಸುತ್ತಿರುವುದು ಬಹಳ ಸಂತೋಷವಾಗಿದೆ. ತಾಲ್ಲೂಕು ಆಡಳಿತ ಇಂದು ಸರಳವಾಗಿ ಚೆನ್ನಮ್ಮನವರ ಜಯಂತಿಯನ್ನು ಆಚರಿಸಿದ್ದು, ಮುಂದಿನ ವರ್ಷದಿಂದ ತಾಲ್ಲೂಕಿನ ಎಲ್ಲಾ ಮಹಿಳಾ ಸಮಾಜದವರು ಒಗ್ಗೂಡಿ ನಾಗರೀಕರು, ತಾಲೂಕು ಆಡಳಿತದ ಸಹಕಾರದೊಂದಿಗೆ ದೊಡ್ಡ ಮಟ್ಟದಲ್ಲಿ ಆಚರಿಸಬೇಕೆಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಸ್ತಿಗೊಂಡನಹಳ್ಳಿ ದೇವರಾಜ್, ಮುನಿಯೂರು ರಾಮಚಂದ್ರಯ್ಯ, ಇನ್ನರ್ ವೀಲ್ ಕ್ಲಬ್ ಸದಸ್ಯರಾದ ರಾಧಾ, ಮಂಜುಳಾ, ಕಾವ್ಯ, ಮಧು, ಲಕ್ಷ್ಮೀಅಮರ್, ಜಯಕರ್ನಾಟಕ ಸಂಘಟನೆಯ ವೆಂಕಟೇಶ್, ಕಂದಾಯ ಇಲಾಖೆ ನೌಕರರು ಮತ್ತು ಸಿಬ್ಬಂದಿ, ನಾಗರೀಕರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್