ಅಥಣಿ: ಶಿವಾಜಿ ಮಹಾರಾಜರು ಕೇವಲ ಒಬ್ಬ ವೀರ ಯೋಧ ಮಾತ್ರವಲ್ಲ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ ಮಹಾನ್ ನಾಯಕರಾಗಿದ್ದರು ಎಂಬುದಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಅಥಣಿಯಲ್ಲಿ ಇಂದು ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಅಶ್ವಾರೂಢ ಮೂರ್ತಿ ಲೋಕಾರ್ಪಣೆಗೊಳಿಸಿದ ನಂತರ ಜರುಗಿದ ಭವ್ಯವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಶಿವಾಜಿ ಮಹಾರಾಜರ ನೈಜ ಇತಿಹಾಸ ಮತ್ತು ತತ್ವ ಸಿದ್ದಾಂತಗಳ ಕುರಿತು ಮಾತನಾಡಿದರು.
ಶಿವಾಜಿ ಮಹಾರಾಜರು ಕೇವಲ ಒಬ್ಬ ವೀರ ಯೋಧ ಮಾತ್ರವಲ್ಲ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ ಮಹಾನ್ ನಾಯಕರಾಗಿದ್ದರು. ಅವರ ಸ್ವರಾಜ್ಯ ಎಂಬ ಚಿಂತನೆಯಡಿ ಸಮಾನತೆ, ಸಾಮಾಜಿಕ ನ್ಯಾಯ, ಧರ್ಮ ಸಹಿಷ್ಣುತೆ ಮತ್ತು ಜನಕಲ್ಯಾಣವೇ ಅವರ ಆಡಳಿತದ ಮೂಲ ಸಿದ್ಧಾಂತಗಳಾಗಿದ್ದವು. ಎಲ್ಲಾ ವರ್ಗಗಳನ್ನೂ ಒಗ್ಗೂಡಿಸಿ, ನ್ಯಾಯಯುತ ಮತ್ತು ಶಕ್ತಿಶಾಲಿ ರಾಜ್ಯವನ್ನು ನಿರ್ಮಿಸಿದ ಅವರ ದೃಷ್ಟಿ ಇಂದಿಗೂ ಪ್ರೇರಣೆಯಾಗಿಯೇ ಉಳಿದಿದೆ ಎಂದರು.
ಈ ವೇಳೆ ಪರಮ ಪೂಜ್ಯ ಮರಾಠಾ ಸಮಾಜದ ಜಗದ್ಗುರು ಮಂಜುನಾಥ್ ಭಾರತಿ ಸ್ವಾಮಿಜಿ, ಶಿವಾಜಿ ಮಹಾರಾಜರ ವಂಶಸ್ಥರಾದ ಡಾ.ಶ್ರೀಮಂತ ಶಾಹು ಛತ್ರಪತಿ ಮಹಾರಾಜರು, ಕೇಂದ್ರ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಅವರು,ಮಾಜಿ ಕೇಂದ್ರ ಸಚಿವರಾದ ಪಿಜಿಆರ್ ಸಿಂಧಿಯಾ, ಸಚಿವರಾದಸಂತೋಷ ಲಾಡ್, ಸಂಭಾಜಿ ಭಿಡೆ, ಶಾಸಕರು, ಮಾಜಿ ಶಾಸಕರು ಹಲವಾರು ಗಣ್ಯರು ಭಾಗವಹಿಸಿದ್ದರು.




