ಬೆಂಗಳೂರು: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಹಿನ್ನಡೆ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಸಾಲು ಸಾಲು ಆರೋಪ ಮಾಡುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಮಹಿಳಾ ಮೀಸಲಾತಿ ಅವರೊಬ್ಬರ ಆಸ್ತಿ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಮಹಿಳಾ ಮೀಸಲಾತಿ ವಿರೋಧಿಗಳು ಬಿಜೆಪಿಯವರು. ಸೋಲ್ತೀವಿ ಅಂತ ಗೊತ್ತಿದ್ದೂ ಬಿಲ್ ತಂದಿದ್ರು. ಪ್ರಜಾಪ್ರಭುತ್ವದಲ್ಲಿ ನಾವೆಲ್ಲ ಪ್ರತಿನಿಧಿಗಳಲ್ವಾ? ಇನ್ನೂ 240 ಜನ ನಾವು ಗೆದ್ದಿಲ್ವಾ? ಅವರ ಜೊತೆಗೆ ಮಸೂದೆ ಬಗ್ಗೆ ಮಾತಾಡಬೇಕಿತ್ತು.
ಯಾಕೆ ಮಾತಾಡಿಲ್ಲ? ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಅವರೊಬ್ಬರೇ ನಿರ್ಧಾರಗಳನ್ನು ತೆಗೆದುಕೊಂಡು ಜಾರಿ ಮಡುವುದಲ್ಲ. ಏನು ಮಾಡ್ತಿದ್ದೇವೆ ಎಂದು ಹೇಳಬೇಕಿತ್ತು.
ಇದೆಲ್ಲದರ ಬಗ್ಗೆ ಚರ್ಚೆ ಮಾಡಬೇಕಿತ್ತು. ಮಹಿಳಾ ಮೀಸಲಾತಿ ಅವರೊಬ್ಬರ ಆಸ್ತಿ ಅಲ್ಲ. ಮಹಿಳಾ ಮೀಸಲಾತಿ ಹೆಸರಲ್ಲಿ ಕ್ಷೇತ್ರ ಪುಅನರ್ವಿಂಗಡಣೆ ಮಸೂದೆಯನ್ನು ಸೇರಿಸಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದರು.
ಕ್ಷೇತ್ರ ಪುಅನರ್ವಿಂಗಡೆ ಮೂಲಕ ದಕ್ಷಿಣ ಭಾರತದ ಕ್ಷೇತ್ರ ಕಡಿಮೆ ಮಾಡುವ ಯತ್ನ ನಡೆಸಿದ್ದಾರೆ. ನಮ್ಮನ್ನ ಕರೆದು ಚರ್ಚಿಸದೇ ಉತ್ತರ ಭಾರತದಲ್ಲಿ ಕ್ಷೇತ್ರಗಳನ್ನ ಜಾಸ್ತಿ ಮಾಡಿಕೊಳ್ಳಲು ಹೊರಟಿದ್ದರು. ದಕ್ಷಿಣ ಭಾರತ ಕ್ಷೇತ್ರ ಕಡಿಮೆ ಮಾಡಲು ಹೊರಟಿದ್ದರು. ಇದನ್ನು ಯಾರೂ ಸಹಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ದಕ್ಷಿಣ ಭಾರತದ ಎಂಪಿಗಳು ಪ್ರತಿಭಟನೆ ಮಾಡಿದ್ದಾರೆ. ಮಸೂದೆಗೆ ಸೋಲಾಗಿರುವುದು ಪ್ರತಿಭಟನೆಗೆ ಸಿಕ್ಕ ದೊಡ್ಡ ಜಯ. ನಾವು ಅವಮಾನ ಮಾಡಿಲ್ಲ. ಮಹಿಳಾ ಪರ ನಿಂತಿರೋದು ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ತಿಳಿಸಿದ್ದಾರೆ.




