ಬೆಳಗಾವಿ : ರಾಜ್ಯ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳಿಂದಾಗಿ ತಲಾ ಆದಾಯದಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನ ತಲುಪಿದ್ದು, ರಾಜ್ಯದ ತಲಾದಾಯ ಸರಾಸರಿ 3.39 ಲಕ್ಷ ರು.ಗೆ ತಲುಪಿದೆ.
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿಧಾನಪರಿಷತ್ತಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿನ ಆರ್ಥಿಕ ಅಸಮಾನತೆ ಕಡಿಮೆಯಾಗುವಂತೆ ಮಾಡಿದೆ. ತಲಾ ಆದಾಯದಲ್ಲಿ ಕರ್ನಾಟಕವು ದೇಶಕ್ಕೇ ಮೊದಲ ಸ್ಥಾನ ಪಡೆಯುವಂತಾಗಿದೆ.
ಆದರೂ ಇನ್ನೂ ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ನಡುವಿನ ಅಸಮಾ ನತೆ ಕಡಿಮೆಯಾಗಿಲ್ಲ.ಗ್ಯಾರಂಟಿ ಯೋಜನೆಗಳಿಗಾಗಿ ಸರ್ಕಾರ 1.06 ಲಕ್ಷ ಕೋಟಿ ರು. ವೆಚ್ಚ ಮಾಡಿದ್ದು, ಅದರಲ್ಲಿ ಉತ್ತರ ಕರ್ನಾಟಕಕ್ಕಾಗಿಯೇ46,276 ಕೋಟಿರು.ವ್ಯಯಿಸಲಾಗಿದೆ. ಗ್ಯಾರಂಟಿ ಸ್ತ್ರೀಂಗಳ ಒಟ್ಟು ವೆಚ್ಚದಲ್ಲಿ ಶೇ. 43.63ರಷ್ಟನ್ನು ಉತ್ತರ ಕರ್ನಾಟಕ ಭಾಗಕ್ಕೆ ಖರ್ಚು ಮಾಡಲಾಗಿದೆ ಎಂದರು.
ವಿಧಾನ ಪರಿಷತ್ ಅನ್ನು ಹಿರಿಯರ ಮನೆ ಎಂದು ಕರೆಯಲಾಗುತ್ತಿದ್ದು, ಇಲ್ಲಿನ ಸದಸ್ಯರ ಮಾತಿಗೆ ತೂಕವಿರುತ್ತದೆ.
ಸದಸ್ಯರ ಸಲಹೆಗಳು ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ಬಹಳ ಮುಖ್ಯವಾಗುತ್ತದೆ. ಕರ್ನಾಟಕದಲ್ಲಿ 6.95 ಲಕ್ಷ ಜನರಿದ್ದಾರೆ. ಅದರಲ್ಲಿ ಉತ್ತರ ಕರ್ನಾಟಕದಲ್ಲಿ 2.96,28,767 ಜನರಿದ್ದಾರೆ.
42% ಮಾತ್ರ ಉತ್ತರ ಕರ್ನಾಟಕದಲ್ಲಿ ಇದ್ದಾರೆ. 58% ದಕ್ಷಿಣ ಕರ್ನಾಟಕದಲ್ಲಿದ್ದಾರೆ. ಉತ್ತರ ಕರ್ನಾಟಕದಲ್ಲಿ 31 ಜಿಲ್ಲೆಗಳಲ್ಲಿ 14 ಉತ್ತರ ಕರ್ನಾಟಕಕ್ಕೆ ಬರುತ್ತವೆ. 224 ವಿಧಾನ ಸಭಾ ಕ್ಷೇತ್ರಗಳಲ್ಲಿ 97 ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದಲ್ಲಿ ಬರುತ್ತವೆ.
ರಾಜ್ಯದ ಸಮಗ್ರ ಅಭಿವೃದ್ಧಿಗೆ ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಅಸಮತೋಲನ ನಿವಾರಣೆಯಾಗಿ ಸಮಾನತೆ ಸಾಧಿಸಬೇಕು.
ಪ್ರಾದೇಶಿಕ ಅಸಮಾನತೆ ನಿವಾರಿಸದಿದ್ದರೆ, ಜನರ ಕೂಗು ಇದ್ದೇ ಇರುತ್ತದೆ. ಉತ್ತರ ಕರ್ನಾಟಕದ ಬಗ್ಗೆ ಅಭಿವೃದ್ಧಿಯಾಗದೇ ಇರಲು ಹಲವು ಕಾರಣಗಳಿವೆ.
ಬೆಂಗಳೂರು ಹಾಲು ಯೂನಿಯನ್ನಲ್ಲಿ ನೋಡಿದರೆ ಒಂದು ದಿನಕ್ಕೆ 17 ಲಕ್ಷ ಲೀ. ಉತ್ಪಾದನೆಯಗುತ್ತಿದ್ದು, ಕಲಬುರ್ಗಿ ಹಾಲು ಯೂನಿಯನ್ ದಲ್ಲಿ 67 ಸಾವಿರ ಲೀ. ಹಾಲು ಉತ್ಪಾದನೆಯಾಗುತ್ತದೆ.
ಇದು ಪ್ರಾದೇಶಿಕ ಅಸಮಾನತೆಗೆ ಸ್ಪಷ್ಟ ಉದಾಹರಣೆಯಾಗಿದೆ. ಇದು ಜಿಲ್ಲಾವಾರು ತಲಾ ಆದಾಯದ ಮೇಲೂ ಪರಿಣಾಮ ಬೀರುತ್ತದೆ. ಕರ್ನಾಟಕ ರಾಜ್ಯದಲ್ಲಿ ಸರಾಸರಿ ತಲಾ ಆದಾಯ 3,39,813 ರೂ. ಇದೆ.
ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲಿ ನಂ.1 ರಾಜ್ಯವಾಗಿದೆ. ಹೈನುಗಾರಿಕೆ ಚಟುವಟಿಕೆಗಳು, ಕೈಗಾರಿಕೆಗಳು ಜಾಸ್ತಿಯಾದರೆ, ಜನರ ವಲಸೆ ಕಡಿಮೆಯಾಗಿ ಆರ್ಥಿಕತೆ ಸುಧಾರಿಸಿ, ತಲಾ ಆದಾಯವೂ ಜಾಸ್ತಿಯಾಗುತ್ತದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನರ ತಲಾವಾರು ಆದಾಯ ಹೆಚ್ಚಾಗಿದೆ. ಆದ್ದರಿಂದ ಕರ್ನಾಟಕ ತಲಾವಾರು ಆದಾಯದಲ್ಲಿ ಮೊದಲನೇ ಸ್ಥಾನದಲ್ಲಿದೆ.




