ಪಾವಗಡ : ತಾಲೂಕಿನ ನಾಗಲಮಡಿಕೆ ಹೋಬಳಿ, ಗ್ಯಾದಿಗುಂಟೆ ಗ್ರಾಮದಲ್ಲಿ ಸುಮಾರು 90 ವರ್ಷಗಳಿಂದ ಪೂರ್ವಜರ ಕಾಲದಿಂದಲೂ ಉಳುಮೆ ಮಾಡಿಕೊಂಡು ಬರುತ್ತಿರುವ ಇನಾಂ ಜಮೀನನ್ನು ತಮಗೆ ಮರು ಮಂಜೂರಾತಿ ಮಾಡಿಕೊಡಬೇಕೆಂದು ಒತ್ತಾಯಿಸಿ, ಕರ್ನಾಟಕ ಆದಿ ಜಾಂಬವ ಅಂಬೇಡ್ಕರ್ ಸೇನೆ ಸಮಸ್ಥಾಪಕ ಅಧ್ಯಕ್ಷ ಜಿ.ಟಿ. ಮುತ್ತಾಲಪ್ಪ ಹಾಗೂ ಗ್ರಾಮದ ಕುಟುಂಬಸ್ಥರು ಶನಿವಾರ ತಹಶೀಲ್ದಾರ್ ವೈ. ರವಿ ಅವರಿಗೆ ಮನವಿ ಪತ್ರ ನೀಡಿದ್ದಾರೆ.
ಗ್ಯಾಡಿಗುಂಟಿ ಗ್ರಾಮದ ಸರ್ವೆ ನಂಬರ್ 83ರಲ್ಲಿ 42 ಎಕರೆ 33 ಗುಂಟೆ ಹಾಗೂ ಸರ್ವೆ ನಂಬರ್ 49ರಲ್ಲಿ 1 ಎಕರೆ 5 ಗುಂಟೆ ತೋಟ ಇನಾಂ ಜಮೀನನ್ನು ನರಸಿಂಹ, ನರಸಿಗ, ಮುತ್ತಾಲಪ್ಪ ಮತ್ತು ಲಕ್ಷ್ಮೀಗ ಎಂಬುವವರ ವಂಶಸ್ಥರು ಹಲವು ದಶಕಗಳಿಂದ ಅನುಭವಿಸಿಕೊಂಡು ಬರುತ್ತಿದ್ದಾರೆ.
ಆದರೆ, 1984ರಲ್ಲಿ ಸರ್ಕಾರದ ಆದೇಶದಂತೆ ಮರು ಮಂಜೂರಾತಿ ಪ್ರಕ್ರಿಯೆ ನಡೆದಾಗ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಹಾಗೂ ಪ್ರತಿವಾದಿಗಳ ಹಸ್ತಕ್ಷೇಪದಿಂದಾಗಿ ಅರ್ಹರಿಗೆ ನ್ಯಾಯ ಸಿಕ್ಕಿಲ್ಲ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಆದಿ ಜಾಂಬವ ಅಂಬೇಡ್ಕರ್ ಸೇನೆ ಸಮಸ್ಥಾಪಕ ಅಧ್ಯಕ್ಷ ಜಿ.ಟಿ. ಮುತ್ತಾಲಪ್ಪ, “ನಮ್ಮ ಪೂರ್ವಜರು ತೋಟಿ ಇನಾಂ ಚಾಕ್ರಿ ಕೆಲಸ ಮಾಡಿಕೊಂಡು ಈ ಭೂಮಿಯನ್ನು ನಂಬಿ ಬದುಕುತ್ತಿದ್ದಾರೆ. ಆದರೆ ದಾಖಲೆಗಳಲ್ಲಿನ ವ್ಯತ್ಯಾಸ ಹಾಗೂ ಸುಳ್ಳು ಮಾಹಿತಿ ನೀಡಿ ಬೇರೆಯವರು ಭೂಮಿಯನ್ನು ಪಡೆಯಲು ಯತ್ನಿಸುತ್ತಿದ್ದಾರೆ. ಈ ಬಗ್ಗೆ ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ. ತಹಶೀಲ್ದಾರ್ ಅವರು ಈ ಕೂಡಲೇ ಮಧ್ಯಪ್ರವೇಶಿಸಿ, ಸ್ಥಳ ಪರಿಶೀಲನೆ ನಡೆಸಿ ನಮಗೆ ನ್ಯಾಯ ಒದಗಿಸಬೇಕು,” ಎಂದು ಒತ್ತಾಯಿಸಿದರು.ಮನವಿ ಸ್ವೀಕರಿಸಿದ ತಹಶೀಲ್ದಾರ್ ವೈ. ರವಿ ಅವರು, ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ವೇಳೆ ಗಂಗರಾಜು ಡಿಜೆ.ನರಸಿಂಹಪ್ಪ. ನಾರಾಯಣ. ಸಾಕೆ ನಾರಾಯಣ. ನಾರಾಯಣಪ್ಪ( ನಾನಿ). ಇನ್ನೂ ಮುಂತಾದ ಮುಖಂಡರು ಹಾಗೂ ಮುತ್ತಾಲಪ್ಪನವರ ಕುಟುಂಬಸ್ಥರು ಹಾಗೂ ಗ್ರಾಮದ ಗ್ರಾಮಸ್ಥರು ಹಾಜರಿದ್ದರು.
ವರದಿ: ಶಿವಾನಂದ




