ತುರುವೇಕೆರೆ : ಪಟ್ಟಣದ ಕೆರೆ ಕೋಡಿ ಬಳಿ ಎರಡು ಬೈಕುಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿ ಅಪಘಾತ ಸಂಭವಿಸಿದ್ದು, ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಮೃತ ವ್ಯಕ್ತಿಯನ್ನು ತಾಲೂಕಿನ ಪುರ ಗ್ರಾಮದ ದೇವರಾಜ್ ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ದೇವರಾಜ್ ಶ್ರಾವಣ ಮಾಸದ ಪೂಜೆಗಾಗಿ ತುರುವೇಕೆರೆಯಿಂದ ಗ್ರಾಮಕ್ಕೆ ಪೂಜಾ ಸಾಮಾನು ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ಇದೇ ಸಮಯದಲ್ಲಿ ಬಾಣಸಂದ್ರದ ಕಡೆಯಿಂದ ಬರುತ್ತಿದ್ದ ವಾಹನವನ್ನು ಹಿಮ್ಮೆಟ್ಟಿಸಿ (ಓವರ್ ಟೇಕ್) ಮಾಡಿಕೊಂಡು ಬಂದ ದ್ವಿಚಕ್ರ ವಾಹನವು ದೇವರಾಜ್ ಅವರ ವಾಹನಕ್ಕೆ ನೇರಾನೇರ ಢಿಕ್ಕಿ ಹೊಡೆದ ಪರಿಣಾಮ ದೇವರಾಜ್ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.


ಬಾಣಸಂದ್ರದ ಕಡೆಯಿಂದ ಬಂದ ದ್ವಿಚಿಕ್ರ ವಾಹನದಲ್ಲಿ ಮೂವರು ಇದ್ದು ಅವರೆಲ್ಲರಿಗೂ ತೀವ್ರ ಗಾಯಗಳಾಗಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಮಾಡಿಸಿ ಹೆಚ್ಚಿನ ಚಿಕಿತ್ಸೆಗೆ ಆದಿಚುಂಚನಗಿರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮೃತ ದೇವರಾಜ್ ಅವರ ಮರಣೋತ್ತರ ಪರೀಕ್ಷೆ ತುರುವೇಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ. ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಬ್ ಇನ್ಸ್ ಪೆಕ್ಟರ್ ಮೂರ್ತಿ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.


