ವಿಜಯಪುರ : 40 ಎಕರೆ ಜಮೀನಿನಲ್ಲಿ ಎಡೆ ಹೊಡೆಯಲು 18ರಿಂದ 20 ಗಂಟೆಗಳವರೆಗೆ ಸಮಯ ಬೇಕಾಗುತ್ತದೆ.
ಆದರೆ ವಿಜಯಪುರ ಜಿಲ್ಲೆಯ ಗೊಳಸಂಗಿ ಗ್ರಾಮದ ಜೋಡೆತ್ತುಗಳು ಕೇವಲ 9 ಗಂಟೆಗಳಲ್ಲಿ ಬರೋಬ್ಬರಿ 40 ಎಕರೆ ಜಮೀನಿನಲ್ಲಿ ಎಡೆ ಹೊಡೆದು ಗಮನ ಸೆಳೆದಿವೆ.
ರೈತ ಮಕ್ಬುಲ್ ನಾಗರಾಳ ಅವರಿಗೆ ಸೇರಿದ ಈ ಜೋಡೆತ್ತುಗಳ ಸಾಧನೆ ಇದೀಗ ಸ್ಥಳೀಯವಾಗಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಗೊಳಸಂಗಿ ಗ್ರಾಮದ ರೈತ ಮಕ್ಬುಲ್ ನಾಗರಾಳ ಅವರು ತಮ್ಮ ಜೋಡೆತ್ತುಗಳನ್ನು ಬಳಸಿ ಜೋಡು ಕುಂಟೆಯ ಮೂಲಕ 40 ಎಕರೆ ಜಮೀನಿನಲ್ಲಿ ಎಡೆ ಹೊಡೆಸಿದ್ದಾರೆ.
ಸಾಮಾನ್ಯವಾಗಿ ಇಷ್ಟೊಂದು ದೊಡ್ಡ ಜಮೀನಿನಲ್ಲಿ ಈ ಕೆಲಸ ಪೂರ್ಣಗೊಳಿಸಲು 18ರಿಂದ 20 ಗಂಟೆಗಳ ಸಮಯ ಬೇಕಾಗುತ್ತದೆ. ಆದರೆ ಮಕ್ಬುಲ್ ಅವರ ಜೋಡೆತ್ತುಗಳು ನಿರಂತರವಾಗಿ ಶ್ರಮಿಸಿ ಕೇವಲ 9 ಗಂಟೆಗಳಲ್ಲೇ ಕೆಲಸ ಪೂರ್ಣಗೊಳಿಸಿರುವುದು ವಿಶೇಷವಾಗಿದೆ.


