ಬಾಗಲಕೋಟೆ: ಮಹಿಳಾ ಸಂಘಟನೆಯೊಂದರ ಮೂಲಕ ಸಾರ್ವಜನಿಕರಿಂದ ಹೂಡಿಕೆ ಪಡೆದು ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಇಬ್ಬರು ಮಹಿಳಾ ಆರೋಪಿಗಳನ್ನು ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ರಚನಾ ಬಂಟನೂರ ಹಾಗೂ ವಿದ್ಯಾಶ್ರೀ ಹಲ್ಲೂರು ಎಂದು ಗುರುತಿಸಲಾಗಿದ್ದು, ಸದ್ಯ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೀಳಗಿ ಪಟ್ಟಣದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ 'ಶ್ರೀ ದುರ್ಗಾದೇವಿ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ'ಯ ವಿರುದ್ಧ ಸಾರ್ವಜನಿಕರಿಗೆ ಆಕರ್ಷಕ ಲಾಭಾಂಶ ನೀಡುವ ಭರವಸೆ ನೀಡಿ ಹಣ ಸಂಗ್ರಹಿಸಿ ವಂಚಿಸಿರುವ ಕುರಿತು ಬೀಳಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿಶೇಷವಾಗಿ ಗ್ರಾಮೀಣ ಭಾಗದ ಮಹಿಳೆಯರನ್ನು ಗುರಿ ಮಾಡಿಕೊಂಡಿದ್ದ ಈ ಸಂಸ್ಥೆಯು, ಸಣ್ಣ ಸಣ್ಣ ಗುಂಪುಗಳನ್ನು ರಚಿಸಿ ಮೂರು ವರ್ಷಗಳ ನಂತರ ಭಾರಿ ಮೊತ್ತದ ಹಣವನ್ನು ಮರಳಿ ನೀಡುವುದಾಗಿ ನಂಬಿಸಿತ್ತು. ಇದನ್ನು ಸತ್ಯವೆಂದು ನಂಬಿದ ನೂರಾರು ಮಹಿಳೆಯರು ತಮ್ಮ ಕಷ್ಟದ ದುಡಿಮೆಯ ಹಣವನ್ನು ವಾರದ ಮತ್ತು ತಿಂಗಳ ಕಂತುಗಳ ರೂಪದಲ್ಲಿ ಹೂಡಿಕೆ ಮಾಡಿದ್ದರು.


