ತುರುವೇಕೆರೆ : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರವರ ಧರ್ಮಪತ್ನಿ ಚನ್ನಮ್ಮನವರು ನಿಧನರಾಗಿರುವ ಹಿನ್ನೆಲೆ ನಾನೂ ಸೇರಿದಂತೆ ಪಕ್ಷ ಹಾಗೂ ಕಾರ್ಯಕರ್ತರು ದುಃಖದಲ್ಲಿರುವ ವೇಳೆ ಈ ವರ್ಷ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ತಿಳಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷ ಆಗಸ್ಟ್ 08 ರಂದು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳು, ಬೆಂಬಲಿಗರು ಆಚರಿಸುತ್ತಾರೆ. ಈ ವರ್ಷವೂ ಆಗಸ್ಟ್ 08 ರಂದು ಅದ್ದೂರಿಯಾಗಿ ನನ್ನ ಹುಟ್ಟುಹಬ್ಬವನ್ನು ಆಚರಿಸಲು ನಿರ್ಧರಿಸಿದ್ದರು. ಆದರೆ ಪಕ್ಷದ ಬೆನ್ನೆಲೆಬಾಗಿ, ನಮ್ಮೆಲ್ಲರ ತಾಯಿಯಂತಿದ್ದ ಚನ್ನಮ್ಮನವರು ದೈವಾಧೀನರಾಗಿರುವುದು ಬಹಳ ನೋವುಂಟು ಮಾಡಿದೆ. ಸೂತಕದ ಮನೆಯಲ್ಲಿ ಸಂಭ್ರಮ ಆಚರಿಸುವುದು ಸರಿಯಲ್ಲದ ಕಾರಣ ನನ್ನೆಲ್ಲಾ ಅಭಿಮಾನಿಗಳಿಗೆ, ಬೆಂಬಲಿಗರಿಗೆ ಹುಟ್ಟು ಹಬ್ಬದ ಕಾರಣಕ್ಕೆ ಯಾವುದೇ ಫ್ಲೆಕ್ಸ್ ಹಾಕಬಾರದು, ಹಾರ, ತುರಾಯಿ ಹಾಕಿ ಸಂಭ್ರಮಿಸಬಾರದು ಎಂದು ಮನವಿ ಮಾಡಿದ್ದೇನೆ ಎಂದರು.
ಆಗಸ್ಟ್ 08 ರಂದು ನನ್ನ ಹುಟ್ಟುಹಬ್ಬದಂದು ಚನ್ನಮ್ಮನವರ ಸ್ಮರಣಾರ್ಥ ಅಶಕ್ತರು, ಅಸಹಾಯಕರಿಗೆ ನೆರವಾಗುವುದು, ಅನ್ನದಾಸೋಹ ಮುಂತಾದ ಸಾಮಾಜಿಕ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು. ಪಟ್ಟಣದ ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡಿಸಲಾಗುವುದು. ಆ ಮೂಲಕ ಚನ್ನಮ್ಮನವರ ಆತ್ಮಕ್ಕೆ ಶಾಂತಿ ಕೋರುವ ಉದ್ದೇಶವನ್ನು ನಾನು ಹೊಂದಿದ್ದೇನೆ. ಈ ನನ್ನ ಉದ್ದೇಶಕ್ಕೆ ಜೆಡಿಎಸ್ ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ಅಭಿಮಾನಿಗಳು ಬೆಂಬಲವಾಗಿ ನಿಂತು ಸೇವಾ ಕಾರ್ಯದಲ್ಲಿ ತೊಡಗಲಿದ್ದಾರೆಂದರು.
ವರದಿ: ಗಿರೀಶ್ ಕೆ ಭಟ್


