ತುರುವೇಕೆರೆ : ಗೃಹಜ್ಯೋತಿ ಯೋಜನೆಯ ನಿಜವಾದ ಫಲಾನುಭವಿಗಳನ್ನು ಗುರುತಿಸಲು ರಾಜ್ಯ ಸರ್ಕಾರ ಮನೆಮನೆಗೆ ತೆರಳಿ ಮರುಪರಿಶೀಲನಾ ಸರ್ವೆ ನಡೆಸುತ್ತಿದ್ದು, ತಾಲ್ಲೂಕಿನ ಎಲ್ಲಾ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳು ನಮ್ಮ ಬೆಸ್ಕಾಂ ಸಿಬ್ಬಂದಿ ತಮ್ಮ ಮನೆಗೆ ಬಂದು ಮಾಹಿತಿ ಕೇಳಿದಾಗ ಮಾಹಿತಿ ನೀಡಿ ಸಹಕಾರ ನೀಡಬೇಕೆಂದು ಬೆಸ್ಕಾಂ ಎಇಇ ರಾಜಶೇಖರ್ ತಿಳಿಸಿದರು.
ಪಟ್ಟಣದಲ್ಲಿ ತಮ್ಮ ಸಿಬ್ಬಂದಿಯೊಂದಿಗೆ ಮನೆಮನೆಗೆ ತೆರಳಿ ಗೃಹಜ್ಯೋತಿ ಯೋಜನೆ ಸರ್ವೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಅವರು ಮಾಧ್ಯಮದೊಂದಿಗೆ ಮಾತನಾಡಿ, ತಾಲ್ಲೂಕಿನಲ್ಲಿ 40,096 ಗೃಹಜ್ಯೋತಿ ನೋಂದಣಿದಾರರಿದ್ದಾರೆ. ಈ ಎಲ್ಲಾ ಫಲಾನುಭವಿಗಳ ಮನೆಗೆ ನಮ್ಮ ಬೆಸ್ಕಾಂ ಸಿಬ್ಬಂದಿ ತೆರಳಿ ಸರ್ಕಾರದ ನಿರ್ದೇಶನದಂತೆ ಗೃಹಜ್ಯೋತಿ ಯೋಜನೆಯ ಅರ್ಹ ಫಲಾನುಭವಿಗಳನ್ನು ಗುರುತಿಸಲು ಪರಿಶೀಲನಾ ಸರ್ವೆ ನಡೆಸುತ್ತಿದೆ. ಈ ಸಮೀಕ್ಷೆಯ ಮೂಲಕ ಅನರ್ಹರನ್ನು ಕೈಬಿಟ್ಟು ಅರ್ಹರಿಗೆ ಸೌಲಭ್ಯ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದರು.
ರಾಜ್ಯದಲ್ಲಿ 2023 ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2023 ಆಗಸ್ಟ್ 01 ರಿಂದ ಉಚಿತವಾಗಿ ರಾಜ್ಯದ ಪ್ರತಿ ಮನೆಗೆ ಗರಿಷ್ಠ 200 ಯೂನಿಟ್ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ ಜಾರಿಗೊಂಡಿದೆ. ಸರ್ಕಾರ ಉತ್ತಮ ಯೋಜನೆ ಜಾರಿಗೊಳಿಸಿದ್ದು ಅರ್ಹ ಫಲಾನುಭವಿಗಳಿಗೆ ತಲುಪಬೇಕೆನ್ನುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಆದರೆ ಅನರ್ಹರು ಈ ಯೋಜನೆಯ ಫಲಾನುಭವಿಗಳಾಗಿ ಸೌಲಭ್ಯ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಯೋಜನೆಯ ಮರುಪರಿಶೀಲನಾ ಸಮೀಕ್ಷೆ ಕೈಗೊಂಡಿದೆ. ಈ ಸಮೀಕ್ಷಾ ಕಾರ್ಯಕ್ಕೆ ನಾಗರೀಕರು ಅಗತ್ಯ ಸಹಕಾರ ನೀಡಬೇಕಿದೆ. ಗೃಹಜ್ಯೋತಿ ಸರ್ವೆಗಾಗಿ ನಿಮ್ಮ ಮನೆಗೆ ಭೇಟಿ ನೀಡುವ ಬೆಸ್ಕಾಂನ ಮೀಟರ್ ರೀಡರ್ ಗಳಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾನ್ ಕಾರ್ಡ್, ಭಾವಚಿತ್ರ ಹಾಗೂ ಬಾಡಿಗೆದಾರರಾಗಿದ್ದರೆ ಬಾಡಿಗೆ ಒಪ್ಪಂದದ ದಾಖಲೆಗಳನ್ನು ಒದಗಿಸಿ ಸಮೀಕ್ಷೆಗೆ ನಾಗರೀಕರು ನೆರವಾಗಬೇಕಿದೆ ಎಂದ ಅವರು, ಈಗಾಗಲೇ ತುರುವೇಕೆರೆ ತಾಲ್ಲೂಕಿನಲ್ಲಿ 4800 ಗೃಹಜ್ಯೋತಿ ಫಲಾನುಭವಿಗಳ ಸಮೀಕ್ಷೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಶೇ.100 ರಷ್ಟು ಸಮೀಕ್ಷಾ ಕಾರ್ಯ ಪೂರ್ಣಗೊಂಡು ಸಮೀಕ್ಷಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಸಮೀಕ್ಷಾ ಕಾರ್ಯದಲ್ಲಿ ಎಎಒ ಹುಚ್ಚಪ್ಪ, ಎಇ ಜಾನ್ ಮಧುಕರ್, ಲೈನಮನ್ ರಂಗನಾಥ್ ಇದ್ದರು.
ವರದಿ: ಗಿರೀಶ್ ಕೆ ಭಟ್


