ನಿಡಗುಂದಿ: ತಾಲೂಕಿನ ಕಮದಾಳ ಪ್ರೌಢಶಾಲೆಯ ಆವರಣದಲ್ಲಿ ನಾಗರಹಾವೊಂದು ಕಾಣಿಸಿಕೊಂಡು ಘಟನೆ ನಡೆದಿದೆ.
ಶಾಲಾ ಸಮಯ ಮುಗಿದು ವಿದ್ಯಾರ್ಥಿಗಳು ಮನೆಗಳಿಗೆ ತೆರಳಿದ ಬಳಿಕ ಶಾಲೆಯ ಮೈದಾನದಲ್ಲಿ ಹೆಡೆಯೆತ್ತಿ ನಿಂತಿದ್ದ ನಾಗರಹಾವನ್ನು ಸ್ಥಳೀಯರು ಗಮನಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಉರಗ ರಕ್ಷಕ ರವಿ ಯಮನಪ್ಪ ಮಾದರ ಸ್ಥಳಕ್ಕೆ ಧಾವಿಸಿ ಅತ್ಯಂತ ಜಾಗರೂಕತೆಯಿಂದ ಹಾವನ್ನು ಹಿಡಿದಿದ್ದಾರೆ.
ಪ್ರಸ್ತುತ ಶಾಲೆಗಳು ಆರಂಭಗೊಂಡಿದ್ದು, ಮಕ್ಕಳು ಶಾಲೆಗೆ ಆಗಮಿಸುತ್ತಿರುವ ಸಮಯದಲ್ಲಿ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿತ್ತು. ಅದೃಷ್ಟವಶಾತ್ ಘಟನೆ ಸಂಭವಿಸಿದ ವೇಳೆ ಯಾವುದೇ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಇರಲಿಲ್ಲ. ಹಾವನ್ನು ಸುರಕ್ಷಿತವಾಗಿ ರಕ್ಷಿಸಿದ ರವಿ ಮಾದರ ಅವರು ಬಳಿಕ ಅದನ್ನು ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ. ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಹಾವುಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಬಿಡುವ ಕಾರ್ಯವನ್ನು ಅವರು ಹಲವು ವರ್ಷಗಳಿಂದ ಮಾಡುತ್ತಿದ್ದು, ಅವರ ಸೇವೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಸ್ಥಳೀಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ರವಿ ಮಾದರ ಅವರ ಕಾರ್ಯವನ್ನು ಶ್ಲಾಘಿಸಿದ್ದು, ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆಗೆ ಅವರ ಕೊಡುಗೆ ಶ್ಲಾಘನೀಯವಾಗಿದೆ.

