ದಾರವಾಡ: ದಶಕದ ಸಂಭ್ರಮದಲ್ಲಿ ಇರುವ ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯ 7ನೇ ಘಟಿಕೋತ್ಸವವು ಜು.18 ರಂದು ನಡೆಯಲಿದ್ದು, ಐಐಟಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಘೋಷಿಸಿರುವ ಗೌರವ ಡಾಕ್ಟರೇಟ್ ರಾಜ್ಯಸಭಾ ಸದಸ್ಯರಾಗಿರುವ ಸುಧಾಮೂರ್ತಿ ಅವರಿಗೆ ಸಂದಿದೆ.
ನಗರದ ಐಐಟಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಐಐಟಿ ನಿರ್ದೇಶಕ ಪ್ರೊ.ವೆಂಕಪ್ಪಯ್ಯ ದೇಸಾಯಿ ಮಾತನಾಡಿ, 2016 ರಲ್ಲಿ ಆರಂಭಗೊಂಡಿರುವ ಐಐಟಿ ಇದೀಗ ದಶಕದ ಸಂಭ್ರಮದಲ್ಲಿದೆ.
ಈ 7ನೇ ಘಟಿಕೋತ್ಸವದಲ್ಲಿ ಪ್ರಪ್ರಥಮ ಬಾರಿಗೆ ಗೌರವ ಡಾಕ್ಟರೇಟ್ ನೀಡಲು ಉದ್ದೇಶಿಸಲಾಗಿದ್ದು, ಅದಕ್ಕೆ ಶಿಫಾರಸ್ಸು ಮಾಡಲಾಗಿದ್ದ ಸುಧಾಮೂರ್ತಿ ಅವರ ಹೆಸರಿಗೆ ಅನುಮೋದನೆ ಕೂಡ ಸಿಕ್ಕಿದೆ.
ಹೀಗಾಗಿ ಈ ಸಲದ ಘಟಿಕೋತ್ಸವದಲ್ಲಿ ಪ್ರಪ್ರಥಮ ಐಐಟಿ ಗೌರವವನ್ನು ಐಟಿ ಕ್ಷೇತ್ರದ ಜತೆಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ ಸುರ್ಧಾಮೂರ್ತಿ ಅವರಿಗೆ ಪ್ರದಾನ ಮಾಡಲಾಗುವುದು ಎಂದರು.
ಐಐಟಿಯ ಕೇಂದ್ರೀಯ ವಿದ್ಯಾಗ್ರಹಣ ಸಭಾಗೃಹದಲ್ಲಿ ಮಧ್ಯಾಹ್ನ 3:00 ಗಂಟೆಗೆ ನಡೆಯಲಿರುವ ಘಟಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಪ್ರೊ.ಭೀಮ್ ಸಿಂಗ್ , ಗೌರವ ಅತಿಥಿಗಳಾಗಿ ಟಾಟಾ ಪವರ್ ರಿನೀವೆಬಲ್ ಮೈಕ್ರೋಗ್ರಿಡ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮನೋಜ್ ಗುಪ್ತಾ, ಪ್ಯಾನ್ ಐಐಟಿ ಪೂರ್ವ ಛಾತ್ರಗಣ ಅಧ್ಯಕ್ಷ ಪ್ರಭಾತ ಕುಮಾರ ಆಗಮಿಸಲಿದ್ದಾರೆ. ಧಾರವಾಡ ಐಐಟಿ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶರದ್ಕುಮಾರ್ ಸರಾಫ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.


