ಬೆಂಗಳೂರು: ಆದಾಯ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಲು, ನಮ್ಮ ಸರ್ಕಾರ ಪ್ರೀತಿಯಿಂದ ಕೊಟ್ಟಿರುವ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಪ್ರಚಾರ ಮಾಡುತ್ತಿವ ವಿಚಾರವಾಗಿ , ವಿಪಕ್ಷಗಳಿರುವುದೇ ಟೀಕೆ ಮಾಡಲು.ನಾವು ಏನೇ ಒಳ್ಳೆಯದು ಮಾಡಲು ಮುಂದಾದರೂ ಅದಕ್ಕೆ ಅಡ್ಡಗಾಲು ಹಾಕುವುದಕ್ಕೆ ವಿರೋಧ ಪಕ್ಷಗಳಿರುವುದು. ಅವರ ಕೈಯಲ್ಲಿ ಆಗದಿದ್ದ ಕೆಲಸ ನಾವು ಮಾಡುತ್ತಿದ್ದೇವೆ. ಗ್ಯಾರಂಟಿ ಯೋಜನೆ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಲು ಸರ್ಕಾರ ಮುಂದಾಗಿದೆ.
ಆರಂಭದಲ್ಲಿ ಕೆಲವು ಫಲಾನುಭವಿಗಳು ಬೇರೆಯವರ ದೂರವಾಣಿ ಸಂಖ್ಯೆ ಹಾಗೂ ಇತರೆ ಮಾಹಿತಿ ನೀಡಿದ್ದಾರೆ. ಬೇರೆಯವರ ಖಾತೆಗೆ ಹಣ ಹೋಗುತ್ತಿರುವ ಬಗ್ಗೆ ನಮಗೆ ಮಾಹಿತಿ ಇದೆ. ಫಲಾನುಭವಿಗಳ ಖಾತೆಗೆ ಹಣ ಹೋಗುವಂತೆ ಮಾಡುವುದು ಸರ್ಕಾರದ ಉದ್ದೇಶ ಎಂದು ತಿಳಿಸಿದರು.
ಸರ್ಕಾರವು ಕರ್ನಾಟಕದವರಿಗೆ ಈ ಯೋಜನೆ ನೀಡುತ್ತಿದ್ದು, ಅನ್ಯ ರಾಜ್ಯದವರಿಗೆ ಈ ಯೋಜನೆ ನೀಡುವುದಿಲ್ಲ. ಉಚಿತ ವಿದ್ಯುತ್ ಅನ್ನು ನಮ್ಮ ರಾಜ್ಯದ ಮತದಾರರಿಗೆ ನೀಡಬೇಕೇ ಹೊರತು, ಬೇರೆ ರಾಜ್ಯದವರಿಗೆ ಯಾಕೆ ಕೊಡಬೇಕು? ಹೀಗಾಗಿ ಫಲಾನುಭವಿಗಳಿಗೆ ಗುರುತಿನ ಚೀಟಿ ನೀಡಲು ಸಚಿವ ಸಂಪುಟದಲ್ಲಿ ತೀರ್ಮಾನಿಸಿದ್ದೇವೆ.
ಆ ಪ್ರಕ್ರಿಯೆ ನಡೆಯುತ್ತಿದೆ. ಯೋಜನೆ ನಿಲ್ಲಿಸುವುದು ನಮ್ಮ ಉದ್ದೇಶವಲ್ಲ. ನಮ್ಮ ಗ್ಯಾರಂಟಿ ದೇಶಕ್ಕೆ ಮಾದರಿ. ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ ಸೇರಿದಂತೆ ಬೇರೆ ರಾಜ್ಯಗಳು ನಮ್ಮ ಮಾದರಿ ಅನುಸರಿಸಿವೆ ಎಂದು ತಿಳಿಸಿದರು.


