ತುರುವೇಕೆರೆ : ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಸೋತವರು ಕುಗ್ಗದೆ ಗೆದ್ದವರು ಬೀಗದೆ ಕ್ರೀಡಾಸ್ಪೂರ್ತಿಯಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕೆಂದು ಜೆಡಿಎಸ್ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ತಿಳಿಸಿದರು.
ತಾಲ್ಲೂಕಿನ ದಂಡಿನಶಿವರ ಹೋಬಳಿ ದೊಡ್ಡಹಟ್ಟಿ ಗ್ರಾಮದ ಎಸ್.ಕೆ.ಎಸ್. ಕ್ರಿಕೆರ್ಸ್ ವತಿಯಿಂದ 10 ನೇ ವರ್ಷದ ಟೆನ್ನಿಲ್ ಬಾಲ್ ಕ್ರಿಕೆಟ್ ಲೀಗ್ ಟೂರ್ನಿಮೆಂಟಲ್ಲಿ ಬ್ಯಾಟಿಂಗ್ ಮಾಡಿ ಯುವಕರಲ್ಲಿ ಸ್ಪೂರ್ತಿ ತುಂಬುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬರಲ್ಲೂ ಪ್ರತಿಭೆ ಇದ್ದೇ ಇರುತ್ತದೆ. ಆ ಪ್ರತಿಭೆಯನ್ನು ಹೊರಹಾಕುವುದಕ್ಕೆ ಇಂತಹ ವೇದಿಕೆಗಳು ಅತ್ಯಗತ್ಯ. 10 ನೇ ತರಗತಿ ಫೇಲ್ ಆಗಿದ್ದ ಸಚಿನ್ ತೆಂಡೂಲ್ಕರ್ ತನ್ನಲ್ಲಿದ್ದ ಅಪ್ರತಿಮ ಕ್ರಿಕೆಟ್ ಕೌಶಲ್ಯದಿಂದ ಇಂದು ವಿಶ್ವ ಮಟ್ಟದಲ್ಲಿ ಕ್ರಿಕೆಟ್ ದೇವರು ಎನಿಸಿಕೊಳ್ಳಲು ಸಾಧ್ಯವಾಯಿತು. 3ನೇ ತರಗತಿಯಷ್ಟೇ ಓದಿದ್ದ ಮುತ್ತುರಾಜ್ ತಮ್ಮ ಕಲಾ ಕೌಶಲ್ಯದಿಂದ ಕನ್ನಡ ನಾಡಿನಲ್ಲಿ ಡಾ.ರಾಜ್ ಕುಮಾರ್ ಆಗಿ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಸ್ಥಾನ ಪಡೆದಿದ್ದಾರೆ. ಆದ್ದರಿಂದ ಯುವ ಸಮೂಹ ತಮ್ಮಲ್ಲಿರುವ ಪ್ರತಿಭೆಯನ್ನು ಓರೆಗೆ ಹಚ್ಚುವ ಕೆಲಸವನ್ನು ಮಾಡಬೇಕು ಎಂದರು.
ಇಂದು ಕ್ರಿಕೆಟ್ ಮಾತ್ರವಲ್ಲ ಯಾವುದೇ ಕ್ರೀಡೆ ವ್ಯಕ್ತಿಯ ಮಾನಸಿಕ, ದೈಹಿಕ ಆರೋಗ್ಯಕ್ಕೆ ಬಹಳ ಸಹಕಾರಿಯಾದುದು. ಅಲ್ಲದೆ ಕ್ರೀಡೆಯಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಉದ್ಯೋಗಾವಕಾಶ ದೊರೆಯುತ್ತದೆ. ಯಶಸ್ಸನ್ನು ಸಾಧಿಸಬೇಕಾದರೆ ತಮ್ಮ ಗಮನ ಗುರಿಯೆಡೆಗೆ ಇರಬೇಕು. ಗುರಿ ಸಾಧಿಸುವ ಹಾದಿಯಲ್ಲಿ ಬರುವ ಸೋಲು, ಅವಮಾನ ಎಲ್ಲವನ್ನೂ ಬದಿಗೆ ಸರಿಸಿ ಸನ್ಮಾನ, ಯಶಸ್ಸಿನೆಡೆಗೆ ದಾಪುಗಾಲಿಟ್ಟಾಗ ಮಾತ್ರ ಸಾಧಕನಾಗಲು ಸಾಧ್ಯ ಎಂದರು.
ಎಸ್.ಕೆ.ಎಸ್. ಕ್ರಿಕೆರ್ಸ್ ವತಿಯಿಂದ ದೊಡ್ಡಾಘಟ್ಟ ಚಂದ್ರೇಶ್ ಅವರನ್ನು ಸನ್ಮಾನಿಸಲಾಯಿತು. ದೊಡ್ಡಹಟ್ಟಿ ಗ್ರಾಮದ ಸ್ವಾಮಿ, ಶಾಂತಕುಮಾರ್, ಮಹಲಿಂಗಣ್ಣ, ರವೀಶ್, ಪ್ರದೀಪ್, ಜಗದೀಶ್, ಕಾಂತರಾಜು, ನಾಗರಾಜು, ಎಸ್.ಕೆ.ಎಸ್. ಕ್ರಿಕೆರ್ಸ್ ನ ಪದಾಧಿಕಾರಿಗಳು, ಗ್ರಾಮಸ್ಥರು, ವಿವಿಧ ಗ್ರಾಮಗಳ ಕ್ರಿಕೆಟ್ ತಂಡದ ಆಟಗಾರರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್

